ಬೀದರ್: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ್ ನಗರ ಘಟಕದ ಉಪಾಧ್ಯಕ್ಷ ನಾಗೇಶ ಬಿರಾದಾರ ಅವರು ಔರಾದ್ ತಾಲ್ಲೂಕಿನ ಕೌಠಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸೇರಿದಂತೆ 100 ಜನರಿಗೆ ಸಸಿ ವಿತರಿಸುವ ಮೂಲಕ ತಮ್ಮ 33ನೇ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು.
ಕೋವಿಡ್ ಎರಡನೇ ಅಲೆ ವೇಳೆ ಆಮ್ಲಜನಕ ಕೊರತೆಯಿಂದಾಗಿ ಅನೇಕ ಸೋಂಕಿತರು ಪ್ರಾಣ ಕಳೆದುಕೊಂಡಿದ್ದರು. ಜನರಿಗೆ ಆಮ್ಲಜನಕದ ಕುರಿತು ಜಾಗೃತಿ ಮೂಡಿಸಲು ಸಸಿಗಳನ್ನು ವಿತರಿಸಲಾಗಿದೆ ಎಂದು ಬಿರಾದಾರ ಹೇಳಿದರು.
ಜನ್ಮದಿನ, ನಿಶ್ಚಿತಾರ್ಥ, ಮದುವೆ ವಾರ್ಷಿಕೋತ್ಸವ ಮೊದಲಾದ ಕಾರ್ಯಕ್ರಮಗಳನ್ನು ದುಂದು ವೆಚ್ಚದ ಬದಲು ಸಾಮಾಜಿಕ ಚಟುವಟಿಕೆ ಮೂಲಕ ಆಚರಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಪರಿಸರ ಚೆನ್ನಾಗಿದ್ದರೆ ಮಾತ್ರ ಮನುಕುಲಕ್ಕೆ ಉಳಿಗಾಲ ಇದೆ. ಹೀಗಾಗಿ ಪ್ರತಿಯೊಬ್ಬರೂ ಪರಿಸರ ಕಾಳಜಿ ತೋರಬೇಕು. ಕಾರ್ಯಕ್ರಮಗಳಲ್ಲಿ ಸಸಿಗಳನ್ನು ಉಡುಗೊರೆಯಾಗಿ ಕೊಡಬೇಕು ಎಂದು ಜಿಲ್ಲೆಯವರೇ ಆದ ಚಲನಚಿತ್ರ ನಟ ಹಣ್ಮು ಪಾಜಿ ಸಲಹೆ ಮಾಡಿದರು.
ಪ್ರಮುಖರಾದ ರವಿ ದೇವರೆ, ಬಸವರಾಜ ಶೇಳಕೆ, ಓಂಕಾರ ಗಾದಗೆ, ಸಂಗಮೇಶ ಮರ್ತುಳೆ, ಮಲ್ಲಿಕಾರ್ಜುನ ಕೌಠಾ, ಶಿವಾನಂದ ಬಿರಾದಾರ, ಸೂರ್ಯಕಾಂತ ಬೆಳ್ಳೂರೆ ಮೊದಲಾದವರು ಇದ್ದರು.