ಕಮಲನಗರ: ತಾಲ್ಲೂಕಿನ ಡೋಣಗಾಂವ್ (ಎಂ) ಗ್ರಾಮದ ಸೋಮನಾಥ ಬಸವರಾಜ ಗಂಧಗೆ ಕಲ್ಲಂಗಡಿ ಬೇಸಾಯದಲ್ಲಿ ಹೆಚ್ಚಿನ ಪರಿಣಿತಿ ಇಲ್ಲದಿದ್ದರೂ ಎರಡು ವರ್ಷದಲ್ಲಿ ಮಿಶ್ರ ಬೇಸಾಯ ಅಳವಡಿಸಿಕೊಂಡು ಒಂದೇ ಎಕರೆಯಲ್ಲಿ ವರ್ಷಕ್ಕೆ ₹9–10 ಲಕ್ಷ ಆದಾಯ ಪಡೆಯುತ್ತಿದ್ದಾರೆ.
ಕಲ್ಲಂಗಡಿ, ಚಂಡು ಹೂವು, ಹಸಿಮೆಣಸಿನಕಾಯಿ, ಸೌತೆ ಕಾಯಿಗಳನ್ನು ಬೆಳೆಯುತ್ತಿದ್ದಾರೆ.
‘ಮಹಾರಾಷ್ಟ್ರದ ದೇವಣಿಯಿಂದ ₹9ನಂತೆ ಒಂದು ತಂದಿದ್ದಾರೆ. ಎಕರೆಗೆ ₹30–40 ಸಾವಿರ ಖರ್ಚಾಗುತದೆ. ಕಲ್ಲಂಗಡಿಯಿಂದಲೇ ಒಂದೂವರೆ ಲಕ್ಷ ನಿವ್ವಳ ಲಾಭ ಬಂದಿದೆ. 90 ದಿನದಲ್ಲಿ ಕಲ್ಲಂಗಡಿ ಕಟಾವಿಗೆ ಬರುತ್ತದೆ’ ಎಂದು ರೈತ ಸೋಮನಾಥ ತಿಳಿಸಿದರು.
ಒಂದು ಸಸಿಗೆ ₹10 ರೂಪಾಯಿ ನೀಡಿ ಭಾಲ್ಕಿ ತಾಲ್ಲೂಕಿನ ಮೇಳಕುಂದಾದಿಂದ ಚಂಡು ಹೂವಿನ 5,531 ಸಸಿಗಳನ್ನು ತಂದು ಕಲ್ಲಂಗಡಿ ನಡುವೆ ಹಚ್ಚಿದ್ದಾರೆ. ಇದು ಸಹ ಮೂರು ತಿಂಗಳ ಬೆಳೆ. ಹೈದರಾಬಾದ್, ಬಾಲ್ಕಿ, ಉದಗೀರನಿಂದ ವ್ಯಾಪಾರಿಗಳು ಪ್ರತಿ ಕೆ.ಜಿಗೆ ₹100–120 ರಂತೆ 200 ಕ್ವಿಂಟಾಲ್ ಹೂವು ಖರೀದಿಸಿಕೊಂಡು ಹೋಗಿದ್ದು ₹1ಲಕ್ಷ ಲಾಭ ಪಡೆದಿದ್ದಾರೆ.
ಕಲ್ಲಂಗಡಿ, ಚಂಡುಹೂವಿನ ಬೆಳೆ ನಡುವೆ ಸೌತೆಕಾಯಿ ಬೀಜ ಉರಲಾಗಿದ್ದು ಹಚ್ಚಲಾಗಿದ್ದು ಇದೂ ಮೂರು ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಇವರು ಹಚ್ಚಿರುವ ಸೌತೆ ಬೀಜ ಗುಜರಾತಿ ತಳಿಯದ್ದಾಗಿದ್ದು ಉದ್ದನೆ ಕಾಯಿ ಬರುತ್ತದೆ. ಜನರೆಲ್ಲರೂ ಬಹಳ ಇಷ್ಟಪಡುವುದರಿಂದ ₹1ಲಕ್ಷ ರೂಪಾಯಿ ಆದಾಯ ಪಡೆದಿದ್ದಾರೆ.
‘ಕಲ್ಲಂಗಡಿ, ಚಂಡುಹೂವು, ಸೌತೆಕಾಯಿಗಳ ಮಧ್ಯದಲ್ಲಿ ಹಸಿ ಮೆಣಸಿನಕಾಯಿಯನ್ನೂ ಹಚ್ಚಿದ್ದೇವೆ. ಇದು 90 ದಿನಗಳಲ್ಲಿಯೇ ಕಟಾವಿಗೆ ಬರುತ್ತದೆ. ಬೇಡಿಕೆ ಇರುವುದರಿಂದ ಕೆ.ಜಿಗೆ ₹80 –₹100ರ ಸಿಕ್ಕಿದೆ. ಒಣ ಬೇಸಾಯ ಪದ್ಧತಿಗಿಂತ ಮಿಶ್ರ ಬೇಸಾಯಲ್ಲಿ ನಾಲ್ಕು ಪಟ್ಟು ಆದಾಯ ಹಚ್ಚಿನ ಆದಾಯ ಪಡೆಯಬಹುದು’ ಎಂದು ಸೋಮನಾಥ ತಿಳಿಸಿದರು.
ಸೋಮನಾಥ ಅವರು ಯಾವುದೇ ತರಬೇತಿ ಪಡೆಯದೆ ಯು ಟ್ಯೂಬ್ ನೋಡಿ ಮಿಶ್ರ ಬೇಸಾಯ ಮಾಡುತ್ತಿದ್ದಾರೆ. ಅವರ ಕೆಲಸ ಇತರ ರೈತರಿಗೆ ಮಾರ್ಗದರ್ಶನವಾಗಲಿ
-ಉತ್ತಮರಾವ ಮಾನೆ ರೈತ ಡೋಣಗಾಂವ
ಸಂಬಂಧಿಸಿದ ಅಧಿಕಾರಿಗಳ ಸಲಹೆ ಪಡೆದು ಕೃಷಿ ಮಾಡಿದರೆ ಇನ್ನೂ ಹೆಚ್ಚಿನ ಉತ್ಪಾದನೆ ಆದಾಯ ಪಡೆಯಬಹುದು
-ವೈಜನಾಥ ಬಿರಾದಾರ ಕೃಷಿ ಅಧಿಕಾರಿ ಕಮಲನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.