ಖಟಕಚಿಂಚೋಳಿ (ಬೀದರ್ ಜಿಲ್ಲೆ): ಅಪ್ಪ ಅಂದ್ರೆ ಆಕಾಶ. ಸರ್ವಸ್ವ ಕೂಡ. ಆದರೆ, ನನ್ನ ಜೀವನದಲ್ಲಿ ಅಪ್ಪ ಅನ್ನೋ ಎರಡಕ್ಷರದ ಪದವೇ ಕಣ್ಮರೆ ಆಯಿತು. ಆ ದೇವರು ತಂದೆ ಇಲ್ಲದ ಮಕ್ಕಳೆಂಬ ಪಟ್ಟ ಕಟ್ಟಿದ.
ಏಪ್ರಿಲ್ನಲ್ಲಿ ತಂದೆ ಮಲ್ಲಿಕಾರ್ಜುನ ಪಾಟೀಲ (43) ಹೃದಯಾಘಾತ ದಿಂದ ನಿಧನರಾದರು. ತಾಯಿ, ತಂಗಿ ಹಾಗೂ ತಮ್ಮ ಮೂವರೂ ಅಜ್ಜನ ಮನೆಯಲ್ಲಿ ಇದ್ದೇವೆ. ಪ್ರತಿ ವರ್ಷ ಅಪ್ಪನ ದಿನವನ್ನು ಭರ್ಜರಿಯಾಗಿ ಆಚರಿಸುತ್ತಿದ್ದೇವು. ಆದರೆ, ಈ ವರ್ಷ ಅದು ನೆನಪು ಮಾತ್ರ.
ಅಪ್ಪ ನನ್ನನ್ನು ಮುದ್ದು ಮಾಡಿ ಶಾಲೆಗೆ ಕಳಿಸುತ್ತಿದ್ದ ಆ ದಿನಗಳು ಕಣ್ಣೆದುರಿಗೆ ಬರುತ್ತಿವೆ. ಸ್ವಾತಮ್ಮ ನನ್ನ ಮುದ್ದು ಮಗಳೇ ಎಂದು ಕರೆಯುತ್ತಿದ್ದ ಅವರ ಧ್ವನಿ ಕಿವಿಯಲ್ಲಿ ಗೊಂಯ್ಗೊಡುತ್ತಿದೆ.
ನನ್ನ ಅಜ್ಜ, ಅಜ್ಜಿ ಮೃದು ಸ್ವಭಾವದವರು.ಮಾತೃ ಹೃದಯ ಉಳ್ಳವರು. ನನ್ನ ಇಬ್ಬರು ಚಿಕ್ಕಪ್ಪಂದಿರು ಉದ್ಯಮಿಗಳು. ಪ್ರೀತಿ, ವಾತ್ಸಲ್ಯಕ್ಕೆ ಕೊರತೆ ಇಲ್ಲ. ಆದರೆ, ಅಪ್ಪನ ಸ್ಥಾನ ತುಂಬಲಾಗದು. ಅಪ್ಪ ಕಲಿಸಿದ ಶಿಸ್ತಿನ ಪಾಠ, ಧೈರ್ಯ ಹೇಗೆ ಮರೆಯೋಕೆ ಸಾಧ್ಯ?
ನನ್ನ ಗೆಳತಿಯರು ತಮ್ಮ ಅಪ್ಪಂದಿರ ಬಗ್ಗೆ ಪ್ರೀತಿಯಿಂದ ಹೇಳುವಾಗ, ನನ್ನ ಕಣ್ಣಲ್ಲಿ ಅಪ್ಪನ ನೆನಪುಗಳು ತುಂಬಿ ಕೊಳ್ಳುತ್ತವೆ.
–ಸ್ವಾತಿ ಪಾಟೀಲ, 9ನೇ ತರಗತಿ, ತೇಗಂಪುರ, ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ