ಬೀದರ್: ನಿಯಂತ್ರಣ ತಪ್ಪಿದ ಕ್ರೂಸರ್ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಟ್ನಳ್ಳಿ ಸಮೀಪದ ಸೌರಶಕ್ತಿ ಘಟಕದ ಬಳಿ ಗುರುವಾರ ನಸುಕಿನ ಜಾವ ಸಂಭವಿಸಿದೆ.
ಘಟನೆಯಲ್ಲಿ ಯಾಕತಪುರ ಗ್ರಾಮದ ಪ್ರದೀಪ್ ಶಂಕರ ಕೋಳಿ (25), ಚಾಂಗಲೇರಾದ ವಿನೋದಕುಮಾರ ಪ್ರಭು (25) ಹಾಗೂ ವರ್ದಿಶ್ ಶಂಕರ ಬೇಡರ್ (25) ಮೃತಪಟ್ಟಿದ್ದಾರೆ.
ಗಂಭೀರವಾಗಿ ಗಾಯಗೊಂಡ ಚಾಂಗಲೇರಾದ ಸಂಜುಕುಮಾರ ತುಕಾರಾಮ ಬೆನಕೆಪಳ್ಳಿ (26) ಹಾಗೂ ಮಂಜುಕುಮಾರ ತುಕಾರಾಮ ಬೆನಕೆಪಳ್ಳಿ (19) ಅವರನ್ನು ಬೀದರ್ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾಕತಪುರದಿಂದ ಚಾಂಗಲೇರಾಕ್ಕೆ ಹೊರಟಿದ್ದ ವಾಹನದಲ್ಲಿ ಐವರು ಸಂಚರಿಸುತ್ತಿದ್ದರು. ಚಾಲಕನಿಗೆ ನಿದ್ರೆ ಆವರಿಸಿದ್ದರಿಂದ ವಾಹನ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಪಿಎಸ್ಐ ಸುಕಾನಂದ ಸಿಂಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮನ್ನಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.