ಬೀದರ್: ಇಲ್ಲಿಯ ಗುರುಪಾದಪ್ಪ ನಾಗಮಾರಪಳ್ಳಿ (ಜಿ.ಎನ್.) ಫೌಂಡೇಶನ್ ಖಾಸಗಿ ಶಾಲಾ ಶಿಕ್ಷಕರ ಸಂಕಷ್ಟಕ್ಕೆ ಸ್ಪಂದಿಸಿದೆ.
ಒಟ್ಟು 100 ಮಂದಿಗೆ ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ, ಬೇಳೆ, ಎಣ್ಣೆ ಹಾಗೂ ಉಪ್ಪು ಮೊದಲಾದ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಉಚಿತವಾಗಿ ವಿತರಿಸಿ ನೆರವಾಗಿದೆ.
ಖಾಸಗಿ ಶಾಲಾ ಶಿಕ್ಷಕರು ಆರು ತಿಂಗಳಿಂದ ಉದ್ಯೋಗ ಇಲ್ಲದೆ ಕಷ್ಟದಲ್ಲಿ ಇದ್ದಾರೆ. ಕೊರೊನಾ ಸೋಂಕಿನಿಂದ ಕುಟುಂಬ ನಿರ್ವಹಣೆಗೂ ಪರದಾಡುವಂತಹ ಸ್ಥಿತಿಯಲ್ಲಿ ಇರುವ ಅವರಿಗೆ ಜಿ.ಎನ್. ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಸಹಾಯಹಸ್ತ ಚಾಚಿದ್ದಾರೆ ಎಂದು ಅನುದಾನ ರಹಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ ಬೋರೆ ತಿಳಿಸಿದ್ದಾರೆ.
ದೂರವಾಣಿ ಮೂಲಕ ಕರೆ ಮಾಡಿ ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆ ವಿವರಿಸಿದ ತಕ್ಷಣ ಸೂರ್ಯಕಾಂತ ಅವರು ತಮ್ಮ ಸಹಾಯಕರ ಮೂಲಕ ಆಹಾರಧಾನ್ಯ ಕಿಟ್ ಹಾಗೂ ಮಾಸ್ಕ್ಗಳನ್ನು ತಲುಪಿಸಿದ್ದಾರೆ ಎಂದು ಹೇಳಿದ್ದಾರೆ.
ಸದ್ಯದ ಪ್ರತಿಕೂಲ ಪರಿಸ್ಥಿತಿಯಲ್ಲಿ ಯಾರೂ ಎದೆಗುಂದಬಾರದು. ಧೈರ್ಯದಿಂದ ಇರಬೇಕು. ನಿಮ್ಮೊಂದಿಗೆ ನಾನಿದ್ದೇನೆ. ಅನಾನುಕೂಲ ವಿಪರೀತವಾದರೆ ನನ್ನನ್ನು ಸಂಪರ್ಕಿಸಿ. ಕೈಲಾದ ಸಹಾಯ ಮಾಡುವೆ ಎಂದು ಅಭಯ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ವರ ಬಿರಾದಾರ ಅವರು, ಸೂರ್ಯಕಾಂತ ನಾಗಮಾರಪಳ್ಳಿ ಖಾಸಗಿ ಶಿಕ್ಷಕರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅವರಲ್ಲಿ ಆತ್ಮಬಲ ತುಂಬಿದ್ದಾರೆ ಎಂದು ಹೇಳಿದ್ದಾರೆ.
ಜಿ.ಎನ್. ಫೌಂಡೇಶನ್ ಕೊರೊನಾದ ಸಂಕಟದ ಸಂದರ್ಭದಲ್ಲಿ ಜನರಿಗೆ ನೆರವಾಗುತ್ತಿರುವುದು ಪ್ರಶಂಸನೀಯವಾಗಿದೆ ಎಂದು ತಿಳಿಸಿದ್ದಾರೆ.