ಬಸವಕಲ್ಯಾಣ: ತಾಲ್ಲೂಕಿನ ಮುಚಳಂಬದ ಮಡಿವಾಳಪ್ಪ ಪಾಟೀಲ ಅವರ ಹೊಲದಲ್ಲಿನ ಸೋಯಾಬಿನ್ ಬಣವೆ ಬುಧವಾರ ಕಣ್ಣೆದುರಲ್ಲೇ ಚುಳಕಿನಾಲೆಯಲ್ಲಿ ನೀರಿನೊಂದಿಗೆ ಕೊಚ್ಚಿಕೊಂಡು ಹೋಗಿದ್ದರಿಂದ ರೈತ ಕುಟುಂಬ ಗಳಗಳನೆ ಅತ್ತರು. ಸುತ್ತಲಿನವರು ಹತಾಶರಾಗಿ ನೋಡುವಂತಾಯಿತು.
ಭಾರಿ ಮಳೆಗೆ ಚುಳಕಿನಾಲಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿಂದ ನಾಲ್ಕು ಗೇಟ್ಗಳ ಮೂಲಕ ನೀರನ್ನು ನಾಲೆಗೆ ಬಿಡಲಾಯಿತು. ಈ ಕಾರಣ ಮುಚಳಂಬ, ಗೋರಟಾ(ಬಿ), ಮುಸ್ತಾಪುರ, ತೊಗಲೂರ ಗ್ರಾಮಗಳ ವ್ಯಾಪ್ತಿಯಲ್ಲಿನ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಮಡಿವಾಳಪ್ಪ ಪಾಟೀಲ ಅವರ 5 ಎಕರೆ ಜಮೀನಿನಲ್ಲಿನ ಕಟಾವು ಮಾಡಿ ಬಣವೆ ಹಚ್ಚಿ ಇಡಲಾಗಿದ್ದ ಸೋಯಾಬಿನ್ ನೀರು ಪಾಲಾಯಿತಲ್ಲದೆ, ಗೋರಟಾದಲ್ಲಿನ ವೀರಶೆಟ್ಟಿ ಘಾಳೆ ಅವರ ಬಣವೆಯೂ ನೀರಿನಿಂದ ಕೊಚ್ಚಿಕೊಂಡು ಹೋಗಿದೆ. ಗ್ರಾಮದ ದಿಲೀಪಕುಮಾರ ಕಾಶಪ್ಪ, ಅರವಿಂದ ಜ್ಯೋತೆಪ್ಪ, ಗುರುನಾಥ ಹುಡಗೆ, ಚಂದ್ರಕಾಂತ ಮುರುಗೆಪ್ಪ ಅವರ ಕಬ್ಬು ಮಳೆಗೆ ನೆಲಕ್ಕೊರಗಿದೆ.
‘ಬೇಲೂರ, ಧನ್ನೂರ, ಜಾನಾಪುರ ಗ್ರಾಮಗಳಲ್ಲಿ ಜಲಾಶಯದ ಹಿನ್ನೀರು ಹೊಲಗಳಿಗೆ ನುಗ್ಗಿದೆ. ಹಿನ್ನೀರಿನಿಂದ ಬೇಲೂರ ಗ್ರಾಮದ 500 ಎಕರೆಗೂ ಹೆಚ್ಚಿನ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. 50 ಕ್ಕೂ ಹೆಚ್ಚು ರೈತರ ಕಬ್ಬು ನೆಲಕ್ಕೊರಗಿದೆ’ ಎಂದು ಗ್ರಾಮಸ್ಥ ಜಗನ್ನಾಥ ಚಿಲ್ಲಾಬಟ್ಟೆ ಹೇಳಿದ್ದಾರೆ.
‘ಮಳೆ ಹಾಗೂ ಜಲಾಶಯದ ನೀರಿನಿಂದ ಸಾವಿರಾರು ಎಕರೆಯಲ್ಲಿನ ಬೆಳೆ ನಾಶವಾಗಿದೆ' ಎಂದು ಮುಖಂಡರಾದ ಶಿವರಾಜ ನರಶೆಟ್ಟಿ, ಮನೋಜ ಮಾಶೆಟ್ಟಿ ಹೇಳಿದ್ದಾರೆ. ‘ಹಾನಿ ಅನುಭವಿಸಿದ ರೈತರಿಗೆ ಸರ್ಕಾರ ಶೀಘ್ರ ಪರಿಹಾರ ಒದಗಿಸಬೇಕು’ ಎಂದು ವೀರಣ್ಣ ಪಾಟೀಲ ಮೋರಖಂಡಿ, ಗೋವಿಂದ ಶಿಂಧೆ ಆಗ್ರಹಿಸಿದ್ದಾರೆ.
ಕೊಚ್ಚಿಹೋದ ಬೆಳೆ: ‘ಗಂಡೂರಿನಾಲಾ ತುಂಬಿ ಹರಿದು ಹೊಲಗಳಿಗೆ ನೀರು ನುಗ್ಗಿದ್ದರಿಂದ ಸರಜವಳಗಾ, ಶಿರಗಾಪುರ, ಕೊಹಿನೂರವಾಡಿ, ಖೇರ್ಡಾ(ಕೆ) ಗ್ರಾಮಗಳ 800 ಎಕರೆ ಜಮೀನಿನಲ್ಲಿ ಬರೀ ನೀರು ಕಾಣುವಂತಾಗಿತ್ತು. ಹೀಗಾಗಿ ಬೆಳೆಯೊಂದಿಗೆ ಮಣ್ಣು ಕೊಚ್ಚಿಕೊಂಡು ಹೋಗಿದ್ದರಿಂದ ಅನೇಕ ರೈತರು ಕಂಗಾಲಾಗಿದ್ದಾರೆ’ ಎಂದು ಪ್ರಮುಖರಾದ ರಾಜಕುಮಾರ ಶಿರಗಾಪುರ ಹೇಳಿದ್ದಾರೆ.
ಸುತ್ತುವರಿದ ಬೆಣ್ಣೆತೊರೆ: ತಾಲ್ಲೂಕಿನ ಗಡಿಯಂಚಿನಿಂದ ಹರಿಯುವ ಬೆಣ್ಣೆತೊರೆ ನದಿ ತುಂಬಿ ಹರಿಯುತ್ತಿರುವುದರಿಂದ ಹತ್ತರ್ಗಾ ಗ್ರಾಮದಲ್ಲಿನ ಮನೆಗಳು ಜಲಾವೃತಗೊಂಡವು. ಹತ್ತರ್ಗಾ, ಚಿತ್ತಕೋಟಾ, ಗಿಲಗಿಲಿ ಗ್ರಾಮಗಳ ವ್ಯಾಪ್ತಿಯಲ್ಲಿನ ಎಲ್ಲ ಹೊಲಗಳಲ್ಲಿ ಬರೀ ನೀರು ಕಾಣುವಂತಾಯಿತು.
‘ಕಟಾವು ಮಾಡಿ ಇಡಲಾಗಿದ್ದ ಸೋಯಾಬಿನ್ ಬಣವೆಗಳು ನೀರಿನೊಂದಿಗೆ ಸಾಗಿದವು. ತೊಗರಿ ಬೆಳೆ ಕೊಚ್ಚಿಕೊಂಡು ಹೋಯಿತು. ಇದರಿಂದ ಸಾವಿರ ಎಕರೆಯಲ್ಲಿನ ಬೆಳೆ ಹಾನಿಯಾಗಿದೆ' ಎಂದು ಗ್ರಾಮಸ್ಥರಾದ ಬಸವರಾಜ ಚನ್ನಪ್ಪಗೋಳ, ಶ್ರೀನಾಥ ಪಾಟೀಲ ತಿಳಿಸಿದ್ದಾರೆ.
‘ಹತ್ತರ್ಗಾ ಗ್ರಾಮದ ಶ್ರೀಕೃಷ್ಣ ಗುರುಲಿಂಗಪ್ಪ, ಸಿದ್ರಾಮಪ್ಪ ಪರೀಟ್, ಶಿವಪುತ್ರಪ್ಪ ಪಾಟೀಲ, ಬಸವರಾಜಸ್ವಾಮಿ, ರಮೇಶ ಪಾಟೀಲ ಅವರ ಮನೆಗಳು ಜಲಾವೃತಗೊಂಡು ಕುಸಿದಿವೆ. ಸಂಬಂಧಿತರು ಶೀಘ್ರ ಸ್ಥಳಕ್ಕೆ ಬಂದು ಹಾನಿ ಸಮೀಕ್ಷೆ ಮಾಡಬೇಕು' ಎಂದು ರಾಜೇಂದ್ರ ಹಂದ್ರಾಳೆ, ರಮೇಶ ಬಳಬಟ್ಟೆ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.