ಬೀದರ್: ಕೋವಿಡ್ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ 1 ರಿಂದ 10ನೇ ವರೆಗೆ ಉಚಿತ ಶಿಕ್ಷಣ ಕೊಡಲಾಗುವುದು ಎಂದು ಬಸವ ತತ್ವ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈಜಿನಾಥ ಕಮಠಾಣೆ ಘೋಷಿಸಿದರು.
ಇಲ್ಲಿಯ ವಿದ್ಯಾನಗರ ಕಾಲೊನಿಯ ವಿ.ಕೆ. ಇಂಟರ್ನ್ಯಾಷನಲ್ನಲ್ಲಿ ಶನಿವಾರ ನಡೆದ ಶಿಕ್ಷಕರ ದಿನ, ಹಾನಗಲ್ ಕುಮಾರೇಶ್ವರರ 154ನೇ ಜನ್ಮದಿನ ಹಾಗೂ ವೈಜಿನಾಥ ಕಮಠಾಣೆಯವರ 79ನೇ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದಿನಿಂದಲೂ ಸಂಸ್ಥೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗುತ್ತ ಬಂದಿದೆ. ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಲು ಆರಂಭಿಸಲಾದ ಶಾಲಾ, ಕಾಲೇಜುಗಳಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಶಿಕ್ಷಣ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಸ್ಥೆಯಲ್ಲಿ ನರ್ಸರಿಯಿಂದ ಸ್ನಾತಕೋತ್ತರ ಪದವಿ ವರೆಗೂ ವಿವಿಧ ಕೋರ್ಸ್ಗಳು ಇವೆ. ವಿದ್ಯಾರ್ಥಿಗಳು, ಪಾಲಕರ ಬೇಡಿಕೆ ಮೇರೆಗೆ ಪ್ರಸಕ್ತ ವರ್ಷ ಶಿವಮೊಗ್ಗದ ಕುವೇಂಪು ವಿಶ್ವವಿದ್ಯಾಲಯದ ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸ್ಗಳ ಅಧ್ಯಯನ ಕೇಂದ್ರ ಆರಂಭಿಸಲಾಗಿದೆ ಎಂದು ಹೇಳಿದರು.
ಶಿಕ್ಷಕರ ಕೈಯಲ್ಲೇ ದೇಶದ ಭವಿಷ್ಯ ಅಡಗಿದೆ. ಶಿಕ್ಷಕರು ಶಿಕ್ಷಣದ ಜತೆಗೆ ಮಕ್ಕಳಿಗೆ ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನೂ ಬೋಧಿಸಬೇಕು. ಆದರ್ಶ ಪ್ರಜೆಗಳನ್ನು ರಾಷ್ಟ್ರಕ್ಕೆ ಕೊಡುಗೆಯಾಗಿ ಕೊಡಬೇಕು ಎಂದು ಸಲಹೆ ಮಾಡಿದರು.
ಮಕ್ಕಳ ತಜ್ಞ ಡಾ. ಸಿ. ಆನಂದರಾವ್ ಅವರು, ಆರೋಗ್ಯವೇ ಭಾಗ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ವಿ.ಕೆ. ಇಂಟರ್ನ್ಯಾಷನಲ್ ಪ್ರಾಥಮಿಕ ಶಾಲೆಯ ಶಿಕ್ಷಕಿ ಶುಭಮಂಗಳ, ಪ್ರೌಢಶಾಲೆಯ ಮಾಣಿಕರಾವ್ ಕುಲಕರ್ಣಿ, ಪದವಿ ಮಹಾವಿದ್ಯಾಲಯದ ಪರಶುರಾಮ ಸಿಂಧೆ, ಲಕ್ಷ್ಮೀಬಾಯಿ ಕಮಠಾಣೆ ಶಿಕ್ಷಣ ಮಹಾವಿದ್ಯಾಲಯದ ರಾಜೇಶ್ವರಿ ಕುದರೆ, ಬೀದರ್ನ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಯಾದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ವಿದ್ಯಾ ಪಾಟೀಲ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಸವ ತತ್ವ ಶಿಕ್ಷಣ ಸಂಸ್ಥೆ ಸದಸ್ಯೆ ಲಕ್ಷ್ಮೀಬಾಯಿ ಕಮಠಾಣೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆ ಕಾರ್ಯದರ್ಶಿ ಡಾ. ದಿಲೀಪಕುಮಾರ ಕಮಠಾಣೆ, ಸದಸ್ಯೆ ವೈಶಾಲಿ ಕಮಠಾಣೆ, ಆಡಳಿತಾಧಿಕಾರಿಗಳಾದ ಶಿವಲೀಲಾ ಟೊಣ್ಣೆ, ಜಿನ್ಸ್ ಕೆ. ಥಾಮಸ್, ವಿ.ಕೆ. ಇಂಟರ್ನ್ಯಾಷನಲ್ ಶಾಲೆ ಪ್ರಾಚಾರ್ಯೆ ರೋಷ್ಮಿ ಥಾಮಸ್, ಲಕ್ಷ್ಮೀಬಾಯಿ ಕಮಠಾಣೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಧನರಾಜ ಪಾಟೀಲ, ವಿ.ಕೆ. ಇಂಟರ್ನ್ಯಾಷನಲ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ನಾಗೇಶ ಬಿರಾದಾರ, ಪ್ರಕಾಶ ಮಾಲೇಕರ್, ಬಜರಂಗ ಲೋಹಾರ್, ರವಿ ದೇವಾ, ಮನೋಜ್ ಜೈನ್ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.