ಖಟಕಚಿಂಚೋಳಿ: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಇದರಿಂದ ತರಕಾರಿಗಳ ಬೆಲೆಯಲ್ಲಿಯೂ ವ್ಯತ್ಯಾಸವಾಗಿದೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಪ್ರತಿ ಕೆಜಿಗೆ ₹ 180ರಂತೆ ಮಾರಾಟವಾದರೆ, ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ಕಳೆದ ಎರಡು ತಿಂಗಳ ಹಿಂದೆ ಟೊಮೆಟೊ ಬೆಲೆ ಗಗನಕ್ಕೇರಿದ್ದರಿಂದ ಬಹುತೇಕ ರೈತರು ಟೊಮೆಟೊ ಬೆಳೆದಿದ್ದಾರೆ. ಈಗ ಮಾರುಕಟ್ಟೆಗೆ ಅಗತ್ಯಕ್ಕಿಂತ ಹೆಚ್ಚು ಟೊಮೆಟೊ ಆವಕವಾಗುತ್ತಿರುವುದರಿಂದ ಬೆಲೆ ಸಂಪೂರ್ಣ ಕುಸಿತಗೊಂಡಿದೆ ಎಂದು ವ್ಯಾಪಾರಿ ಶಿವಾನಂದ ಮಾಡಗೂಳ ತಿಳಿಸುತ್ತಾರೆ.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಯಾವುದೇ ತರಕಾರಿ ಬೆಲೆಯಲ್ಲಿ ಹೇಳಿಕೊಳ್ಳುವಷ್ಟು ಏರಿಕೆಯಾಗಿಲ್ಲ. ಆದರೆ ಮೆಂತೆ, ಪಾಲಕ ಶತಕದ ಗಟಿ ದಾಟಿವೆ. ಈರುಳ್ಳಿ ಪ್ರತಿ ಕ್ವಿಂಟಾಲ್ ಗೆ ₹ 1 ಸಾವಿರದಷ್ಟು ಹೆಚ್ಚಳವಾಗಿದೆ. ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.
ಕಳೆದ ತಿಂಗಳಿನಿಂದ ತರಕಾರಿ ಮಾರುಕಟ್ಟೆಗೆ ನೆರೆ ಹೊರೆ ಗ್ರಾಮಗಳಿಂದ ತರಕಾರಿ ಬರುತ್ತಿರುವುದರಿಂದ ಬಹುತೇಕ ತರಕಾರಿ ಬೆಲೆಯಲ್ಲಿ ಏರಿಳಿತವಾಗಿಲ್ಲ. ಆಲೂಗಡ್ಡೆ, ಮೆಣಸಿನಕಾಯಿ, ಎಲೆಕೋಸು, ಚವಳೆಕಾಯಿ, ಬೆಂಡೆಕಾಯಿ ಹಾಗೂ ಹಿರೇಕಾಯಿ ಬೆಲೆ ಸ್ಥಿರವಾಗಿದೆ.
ಹಿರೇಕಾಯಿ ಬೆಲೆ ಪ್ರತಿ ಕ್ವಿಂಟಲ್ಗೆ ₹1 ಸಾವಿರದಷ್ಟು ಕುಸಿದಿದೆ. ಹೂಕೋಸು, ಪಾಲಕ್ ಬೆಲೆ ₹1 ಸಾವಿರ ಹೆಚ್ಚಳವಾದರೆ, ರಾಜ ಬದನೆಕಾಯಿ ಬೆಲೆ ₹1 ಸಾವಿರ ಕಡಿಮೆಯಾಗಿದೆ. ಕೊತ್ತಂಬರಿ ಬೆಲೆಯಲ್ಲಿ ಪ್ರತಿ ಕ್ವಿಂಟಲ್ಗೆ ₹1 ಸಾವಿರದಷ್ಟು ಹೆಚ್ಚಳವಾಗಿದೆ.
ಹೈದರಾಬಾದ್ನಿಂದ ಮೆಣಸಿನಕಾಯಿ, ಆಲೂಗಡ್ಡೆ, ಮೆಂತೆ, ಬೀನ್ಸ್, ಬೆಂಡೆಕಾಯಿ ಮಾರುಕಟ್ಟೆಗೆ ಬಂದಿದೆ. ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಆವಕವಾಗಿದೆ. ಉಳಿದ ಬಹುತೇಕ ತರಕಾರಿ ತೆಲಂಗಾಣದಿಂದ ಬಂದಿದೆ.
‘ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಕರಿಬೇವು ಹಾಗೂ ಕೊತ್ತಂಬರಿ ಬಂದಿದೆ. ರೈತರಿಗೆ ಉತ್ತಮ ಬೆಲೆಯೂ ದೊರಕಿದೆ. ಆದರೆ, ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಕಡಿಮೆಯಾಗಿದೆ’ ಎಂದು ತರಕಾರಿ ಸಗಟು ವ್ಯಾಪಾರಿ ಅಹಮ್ಮದ್ ಪಾಷಾ ಹೇಳುತ್ತಾರೆ.
ಮಾರುಕಟ್ಟೆಗೆ ಸ್ಥಳೀಯವಾಗಿ ಹೆಚ್ಚು ತರಕಾರಿ ಬರುತ್ತಿರುವುದರಿಂದ ಬೆಲೆ ಕಡಿಮೆಯಿದೆ. ಹೀಗಾಗಿ ಗ್ರಾಹಕರು ಚೌಕಾಸಿ ಮಾಡದೇ ಖರೀದಿಸುತ್ತಿದ್ದಾರೆ.