ಬಸವಕಲ್ಯಾಣ ಮತ್ತು ಹುಲಸೂರ ತಾಲ್ಲೂಕುಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ 11 ಮೆಟ್ರಿಕ್ ಪೂರ್ವ ಮತ್ತು 2 ಕಾಲೇಜು ಹಾಸ್ಟೆಲ್ ಹಾಗೂ ಮೂರು ಆಶ್ರಮ ಶಾಲೆಗಳಿವೆ. ವರ್ಷಕ್ಕೆ ಒಟ್ಟು 1,375 ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಉತ್ತಮ ಊಟದ ಜತೆಗೆ ನಿಗದಿಯಂತೆ ಮೊಟ್ಟೆ, ಮಾಂಸವೂ ಕೊಡಲಾಗುತ್ತದೆ. ಶುದ್ಧ ಕುಡಿಯುವ ನೀರು ಹಾಗೂ ಸ್ನಾನಕ್ಕೆ ಬಿಸಿನೀರು ಒದಗಿಸಲಾಗುತ್ತದೆ.
ಬಸವಕಲ್ಯಾಣ, ಬಟಗೇರಾ, ಕೊಹಿನೂರ, ಮುಚಳಂಬ, ಮುಡಬಿ, ರಾಜೇಶ್ವರ, ಹುಲಸೂರ, ನಾರಾಯಣಪುರ, ಯರಬಾಗ ಗ್ರಾಮಗಳಲ್ಲಿ ಮೆಟ್ರಿಕ್ ಪೂರ್ವ ಮತ್ತು ನಂತರ ಬಾಲಕರ ಹಾಸ್ಟೆಲ್ಗಳಿವೆ. `ಹುಲಸೂರನಲ್ಲಿನ ಕಟ್ಟಡ ಮಾತ್ರ ಶಿಥಿಲಗೊಂಡಿದ್ದರಿಂದ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಇತರೆ ಎಲ್ಲೆಡೆ ಉತ್ತಮ ಕಟ್ಟಡ ಮತ್ತು ಅಡುಗೆ ಸಿಬ್ಬಂದಿಗಳಿದ್ದಾರೆ. ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾದರೆ, ನಿಗದಿತ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿಗಳಿಗೂ ಪ್ರವೇಶ ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿ ನಿಲಯದಲ್ಲಿ ನೀರು ಬಿಸಿ ಮಾಡುವ ಸೋಲಾರ್ ವ್ಯವಸ್ಥೆ ಇದೆ. ಗ್ರಂಥಾಲಯ, ಊಟದ ಕೊಠಡಿಗಳು ಸಹ ಇವೆ' ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿಲೀಪ ಉತ್ತಮ ತಿಳಿಸಿದ್ದಾರೆ.