ಬೀದರ್: ಜಿಲ್ಲೆಯಾದ್ಯಂತ ಸತತ ನಾಲ್ಕನೇ ದಿನವೂ ಮಳೆ ಮುಂದುವರೆದಿದೆ.
ಸತತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಡರಾತ್ರಿ ಕೆಲ ಸಮಯ ಬಿಡುವು ಕೊಟ್ಟ ಮಳೆ ಪುನಃ ಆರಂಭಗೊಂಡಿತು. ಬೆಳಿಗ್ಗೆ ಜೋರು ಮಳೆಯಾಯಿತು. ಶಾಲಾ, ಕಾಲೇಜು, ದೈನಂದಿನ ಕೆಲಸಗಳಿಗೆ ಹೋಗುವವರು ತೀವ್ರ ಪರದಾಟ ನಡೆಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಅಪಾರ ನೀರು ಸಂಗ್ರಹಗೊಂಡಿದ್ದು, ವಾಹನಗಳು ನಿಧಾನ ಗತಿಯಲ್ಲಿ ಸಂಚರಿಸುತ್ತಿವೆ.
ಗುರುವಾರ ರಾತ್ರಿ ತಾಲ್ಲೂಕಿನ ಸಿಂದೋಲ್ ಸಮೀಪದ ಕಿರು ಸೇತುವೆ ಜಲಾವೃತವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಾಹನಗಳ ಸಂಚಾರ ನಿರ್ಬಂಧಿಸಿದ್ದಾರೆ. ಇದರ ಪರಿಣಾಮ ವಾಹನಗಳು ಸುತ್ತು ಬಳಸಿ ಸಂಚರಿಸುತ್ತಿವೆ. ಜಿಲ್ಲೆಯ ಬಹುತೇಕ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ.
ಬೀದರ್ ಜಿಲ್ಲೆಯಲ್ಲಿ ಒಟ್ಟು 22.27 ಮಿ.ಮೀ ಮಳೆ ದಾಖಲಾಗಿದೆ. ಚಿಟಗುಪ್ಪದಲ್ಲಿ ಅತಿ ಹೆಚ್ಚು 57 ಮಿ.ಮೀ ಮಳೆ ಸುರಿದಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.