ಬೀದರ್: ಜಿಲ್ಲೆಯಾದ್ಯಂತ ಭಾನುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.
ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಬಿಸಿಲು ಹೆಚ್ಚಿತ್ತು. ಮಧ್ಯಾಹ್ನದ ನಂತರ ಏಕಾಏಕಿ ಕಾರ್ಮೋಡ ಕವಿದು, ಭಾರಿ ಗುಡುಗಿನ ಸದ್ದಿನೊಂದಿಗೆ ಮಳೆಯಾಯಿತು. ಸಂಜೆಯ ವರೆಗೆ ಬಿಟ್ಟು ಬಿಟ್ಟು ಮಳೆ ಸುರಿಯಿತು. ಬಿಸಿಲಿನ ಝಳ ದೂರವಾಗಿ ತಂಗಾಳಿ ಬೀಸಲಾರಂಭಿಸಿತು. ಜಿಲ್ಲೆಯ ಭಾಲ್ಕಿ, ಹುಲಸೂರ, ಬಸವಕಲ್ಯಾಣ, ಔರಾದ್, ಬೀದರ್, ಚಿಟಗುಪ್ಪ ತಾಲ್ಲೂಕುಗಳಲ್ಲಿ ಮಳೆಯಾಗಿದೆ. ಸಿಡಿಲಿಗೆ ಚಿಟಗುಪ್ಪ ತಾಲ್ಲೂಕಿನ ಇಟಗಾ ಗ್ರಾಮದಲ್ಲಿ ಇನಾಯತ್ ಸೈಯದ್ (21) ಎಂಬುವರು ಮೃತಪಟ್ಟಿದ್ದಾರೆ. ಭಾನುವಾರ ಸಂಜೆ ಮಾವಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲಿ ಮೃತಪಟ್ಟಿದ್ದಾರೆ.