ಬೀದರ್: ‘ಬುದ್ದ, ಬಸವ, ಅಂಬೇಡ್ಕರ್ ಮತ್ತು ಗಾಂಧಿ ಅವರಂತೆ ವೈಚಾರಿಕ ದೃಷ್ಟಿಕೋನವನ್ನು ಬಿತ್ತುತ್ತ ಸಮಾನತೆ, ಮಾನವೀಯತೆ ಮತ್ತು ಜೀವನಪ್ರೀತಿಯ ಮಂತ್ರ ಪಠಿಸಿ ಅದನ್ನು ಪ್ರೇರೇಪಿಸಿದವರು ಕುವೆಂಪು’ ಎಂದು ಬೀದರ್ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಜಗನ್ನಾಥ ಹೆಬ್ಬಾಳೆ ತಿಳಿಸಿದರು.
ನಗರದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಜ್ಞಾನಪೀಠ ಹಾಗೂ ಸಾಹಿತ್ಯ ಪ್ರಶಸ್ತಿ ಪಡೆದವರಲ್ಲಿ ಕುವೆಂಪು ಅವರು ಮೊದಲಿಗರು. ತಮ್ಮ ಸಾಹಿತ್ಯದಲ್ಲಿ ಮೌಢ್ಯತೆ ಹಾಗೂ ಜಾತಿಯತೆಗೆ ಯಾವುದೇ ಸ್ಥಾನ ನೀಡಿಲ್ಲ. ಅವರು ಮನುಷ್ಯ ಜಾತಿ ಒಂದೇ ಎಂದು ಹೇಳಿದರು.
ಕೇಂದ್ರದ ಅತಿಥಿ ಉಪನ್ಯಾಸಕಿ ಸುನೀತಾ ಕೂಡ್ಲಿಕರ್ ಮಾತನಾಡಿ, ಕುವೆಂಪು ಅವರು ನೋಡುವ ದೃಷ್ಟಿ ವೈಚಾರಿಕತೆಯಿಂದ ಕೂಡಿರುತ್ತಿತ್ತು. ಅವರು ಸರ್ವರಿಗೂ ಸಮಬಾಳು ಎಂದು ತಮ್ಮ ಸಾಹಿತ್ಯದಲ್ಲಿಯೇ ಬರೆದಿದ್ದಾರೆ ಎಂದರು.
ಎಸ್.ಬಿ. ಕುಚಬಾಳ, ಕೇಂದ್ರದ ಉಪನ್ಯಾಸಕ ಗೋರಖನಾಥ, ಶಿವಶರಣಪ್ಪ ಗಣೇಶಪೂರ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಇತರರಿದ್ದರು.