ಔರಾದ್: ‘ಕಾರ್ಮಿಕರಿಗೆ ನೆರವು ನೀಡಬೇಕು’ ಎಂದು ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಸಂಘ ಆಗ್ರಹಿಸಿದೆ.
ಸಂಘದ ಪ್ರಮುಖ ಪ್ರವೀಣ ಕಾರಂಜೆ, ಸಂತೋಷ ಸಿಂಧೆ ಹಾಗೂ ಪ್ರಭುರಾವ ಬಾಚೆಪಳ್ಳಿ ನೇತೃತ್ವದಲ್ಲಿ ಕಾರ್ಮಿಕರು ಇಲ್ಲಿಯ ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಉಪ ತಹಶೀಲ್ದಾರ್ ಅಶೋಕಕುಮಾರ ಅವರಿಗೆ ಮನವಿಪತ್ರ ಸಲ್ಲಿಸಿದರು.
‘ಸರ್ಕಾರ ಕಾರ್ಮಿಕರ ನೋಂದಣಿ ಮಾಡಿಸಲು ಸ್ವಯಂ ದೃಢೀಕರಣ ವ್ಯವಸ್ಥೆ ತಂದಿದೆ. ಆದ್ದರಿಂದ ಅರ್ಹರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ’ ಎಂದು ದೂರಿದರು.
ಗುತ್ತಿಗೆದಾರರು, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಯಿಂದ ಪರವಾನಗಿ ಪಡೆದ ಕಾರ್ಮಿಕರನ್ನು ಮಾತ್ರ ಅಧಿಕೃತ ಎಂದು ಪರಿಗಣಿಸಬೇಕು. ಔರಾದ್ ತಾಲ್ಲೂಕು ಸೇರಿದಂತೆ ವಿವಿಧೆಡೆ ನಕಲಿ ಕಾರ್ಮಿಕರ ನೋಂದಣಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರಿಗೆ ವಿಮೆ, ಅವರ ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಸರ್ಕಾಎ ವಿವಿಧ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಸಂಘದ ಮೊಗಲಪ್ಪ ಬಳತೆ, ಯಶವಂತ ಕಾಂಬಳೆ, ಗಣಪತರಾವ ಸಾದುರೆ, ರಾಮ ರಾಠೋಡ, ಚಂದ್ರಕಾಂತ ಕಾಂಬಳೆ ಹಾಗೂ ಅನಿಲ ಭುಜಂಗ ಇದ್ದರು.