ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಕೆರೆ ಒಡಲಲ್ಲಿ ಕಲಾಕೃತಿಗಳ ಬೀಡು!

ನಾರಾಯಣಪುರ ಕೆರೆಯಲ್ಲಿ ಸ್ಮಾರಕಗಳು; ಸಂಶೋಧನೆಯ ಅಗತ್ಯ
Published 23 ಜುಲೈ 2023, 6:34 IST
Last Updated 23 ಜುಲೈ 2023, 6:34 IST
ಅಕ್ಷರ ಗಾತ್ರ

ಮಾಣಿಕ ಆರ್.ಭುರೆ

ಬಸವಕಲ್ಯಾಣ: ತಾಲ್ಲೂಕಿನ ನಾರಾಯಣಪುರ ಗ್ರಾಮದ ಕೆರೆಯಲ್ಲಿ ಶಿಲ್ಪಕಲಾಕೃತಿಗಳ ರಚನೆಯಿದ್ದು ಅವು ಮಣ್ಣಿನಲ್ಲಿ ಹೂತುಹೋಗಿವೆ. ಇದು ಈ ಭಾಗದಲ್ಲಿನ ಏಕೈಕ ಕೆರೆಯಾಗಿದ್ದು ರಾಷ್ಟ್ರಕೂಟ ಅಥವಾ ಚಾಲುಕ್ಯ ಅರಸರ ಕಾಲದಲ್ಲಿ ನಿರ್ಮಿಸಿರುವ ಸಾಧ್ಯತೆ ಇದೆ.

ಅನೇಕ ಅರಸರ ರಾಜಧಾನಿಯಾಗಿ ಮೆರೆದಿದ್ದ ಬಸವಕಲ್ಯಾಣ ನಗರದಿಂದ ಕೇವಲ 3 ಕಿ.ಮೀ ಅಂತರದಲ್ಲಿ ಕೆರೆಯಿದೆ. ನಾರಾಯಣಪುರ ಗ್ರಾಮದ ಮಧ್ಯದಲ್ಲಿ ಶಿಲ್ಪಕಲಾ ವೈಭವದ ಶಿವ ದೇವಾಲಯವಿದೆ. ಸಣ್ಣಪುಟ್ಟ ಸ್ಮಾರಕಗಳೂ ಇವೆ. ಇವುಗಳ ಕಲಾಕೃತಿಗಳಿಗೂ ಮತ್ತು ಕೆರೆಯಲ್ಲಿನ ಕೆತ್ತನೆಯ ಕಲ್ಲುಗಳಿಗೂ ಸಾಮ್ಯತೆ ಇದೆ.

ಕೆರೆ ದಂಡೆಯಲ್ಲಿ ಭವಾನಿ ದೇವಸ್ಥಾನ, ಮುರ್ತುಜಾ ಖಾದ್ರಿ ದರ್ಗಾ ಇದ್ದು ಇವುಗಳ ಆವರಣದಲ್ಲಿ ವಿವಿಧ ಮೂರ್ತಿಗಳು ಮತ್ತು ಕಲಾಕೃತಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇವೆಲ್ಲ 10-12 ನೇ ಶತಮಾನದ್ದಾಗಿದ್ದು ಕೆರೆಯಲ್ಲಿನ ರಚನೆಯೂ ಅಂದಿನದ್ದೇ ಆಗಿರಬಹುದು ಎನ್ನಲಾಗ್ತಿದೆ.

ಕೆರೆ ದಂಡೆಯಲ್ಲಿ ಶಿಲ್ಪಕಲಾಕೃತಿಗಳು ಅಲ್ಲಲ್ಲಿ ಚದುರಿವೆ. ಅನೇಕ ಕಲ್ಲುಗಳು ಮಣ್ಣಿನಲ್ಲಿ ಹೂತು ಹೋಗಿವೆ. ಕೆರೆ ಮಧ್ಯದಲ್ಲಿ ಭವಾನಿ ದೇವಸ್ಥಾನದ ಹಿಂದುಗಡೆ ನಾಲ್ಕು ಕಲ್ಲಿನ ಕಂಬಗಳ ಆಧಾರದಲ್ಲಿ ನಿಂತಿರುವ ಮಂಟಪವೂ ಇದೆ. ಇದನ್ನು ಮೀನು ಮಂಟಪ ಎಂದು ಕರೆಯಲಾಗುತ್ತದೆ. ಕೆರೆಯಲ್ಲಿನ ನೀರು ಕಡಿಮೆ ಆಗಿರುವುದರಿಂದ ಈ ಮಂಟಪದ ಮೇಲ್ಛಾವಣಿ ಕಾಣಿಸುತ್ತಿದೆ.

ಕೆರೆಗೆ ಪುಷ್ಕರಣಿಯಂತೆ ಮೆಟ್ಟಿಲುಗಳನ್ನು ಕಟ್ಟಲು ಕೆತ್ತನೆಯ ಕಲ್ಲುಗಳನ್ನು ಉಪಯೋಗಿಸಿರುವ ಸಾಧ್ಯತೆ ಇದ್ದು, ಕಾಲಾನಂತರದಲ್ಲಿ ಅದು ಹಾಳಾಗಿದೆ. ಏನಿದ್ದರೂ, ಈ ಬಗ್ಗೆ ಉತ್ಖನನ ಹಾಗೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

ಬಸವಕಲ್ಯಾಣದ ನಾರಾಯಣಪುರ ಕೆರೆಯ ದಂಡೆಯಲ್ಲಿ ಚೆಲ್ಲಾಪಿಲ್ಲಿಯಾಗಿರುವ ಕೆತ್ತನೆಯ ಕಲ್ಲುಗಳು
ಬಸವಕಲ್ಯಾಣದ ನಾರಾಯಣಪುರ ಕೆರೆಯ ದಂಡೆಯಲ್ಲಿ ಚೆಲ್ಲಾಪಿಲ್ಲಿಯಾಗಿರುವ ಕೆತ್ತನೆಯ ಕಲ್ಲುಗಳು

ತಾಲ್ಲೂಕಿನಲ್ಲಿನ ಎರಡನೇ ದೊಡ್ಡ ಕೆರೆ ಬಸವಕಲ್ಯಾಣದಿಂದ 3ಕಿ.ಮೀ ಅಂತರ ನೀರು ಕಡಿಮೆ ಆದರೆ ಕಾಣುವ ಮಂಟಪ

ಐತಿಹಾಸಿಕ ಸ್ಥಳ ಹಾಗೂ ಶರಣ ಸ್ಮಾರಕಗಳ ಜೀರ್ಣೊದ್ಧಾರಕ್ಕಾಗಿ ರಚಿತವಾದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಕೆರೆಯಲ್ಲಿನ ಹೂಳು ತೆಗೆಯಬೇಕು.
ಸುಭಾಷ ರೇಕುಳಗಿ ಗ್ರಾ.ಪಂ.ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT