ಬಸವಕಲ್ಯಾಣ: ಈ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಸ್ಥಳೀಯರಿಗೆ ನೀಡಲು ಆಗ್ರಹಿಸಿ ಆಕಾಂಕ್ಷಿಗಳು ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಇಲ್ಲಿ ಭಾನುವಾರ ನಡೆದ ಸ್ಥಳೀಯ ಆಕಾಂಕ್ಷಿಗಳ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಸಭೆ ಬಳಿಕ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಸದಸ್ಯ ಆನಂದ ದೇವಪ್ಪ ಮಾತನಾಡಿ, ‘ಪಕ್ಷದಿಂದ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬುದು ಜನತೆಯ ಬೇಡಿಕೆಯಾಗಿದೆ. ಹೀಗಾದರೆ ಇಲ್ಲಿನ ಕಾಂಗ್ರೆಸ್ ಸ್ಥಾನವನ್ನು ಉಳಿಸಿಕೊಳ್ಳಬಹುದು’ ಎಂದರು.
ಹಿರಿಯ ಮುಖಂಡ ಶಿವರಾಜ ನರಶೆಟ್ಟಿ, ಬಾಬು ಹೊನ್ನಾನಾಯಕ್ ಮಾತನಾಡಿ, ‘ಸ್ಥಳೀಯ ಆಕಾಂಕ್ಷಿಗಳಲ್ಲಿ ಎಲ್ಲ ಸಮುದಾಯದವರು ಇದ್ದಾರೆ. ಇವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸುತ್ತೇವೆ. ಆದ್ದರಿಂದ ಹೊರಗಿನವರಿಗೆ ಮಣೆಹಾಕಿ ಇಲ್ಲಿನ ವರನ್ನು ಕಡೆಗಣಿಸಬಾರದು’ ಎಂದರು.
ಪಕ್ಷದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಶಂಕರ ಜಮಾದಾರ, ಸುಧಾಕರ ಗುರ್ಜರ್ ಮಾತನಾಡಿ, ‘50 ವರ್ಷಗಳಲ್ಲಿ ಒಮ್ಮೆಯೂ ಸ್ಥಳೀಯರಿಗೆ ಟಿಕೆಟ್ ನೀಡಿಲ್ಲ. ಇದರಿಂದ ಇಲ್ಲಿ ಅರ್ಹ ಅಭ್ಯರ್ಥಿಗಳು ಇಲ್ಲ ಎಂಬ ತಪ್ಪು ಸಂದೇಶ ಹೋಗುತ್ತಿದೆ. ಈ ಬಗ್ಗೆ ಪಕ್ಷದ ವರಿಷ್ಠರು ಯೋಗ್ಯ ನಿರ್ಣಯ ತೆಗೆದುಕೊಳ್ಳಬೇಕು’ ಎಂದರು.