ಬೀದರ್: ಸಂಗೀತ ಮನಸ್ಸಿಗೆ ಮುದ ನೀಡುತ್ತದೆ ಎಂದು ಉದ್ಯಮಿ ಚಂದ್ರಶೇಖರ ಹೆಬ್ಬಾಳೆ ಅಭಿಪ್ರಾಯಪಟ್ಟರು.
ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ ಹಾಗೂ ಸಂಗೀತ ಕಲಾ ಮಂಡಲ ವತಿಯಿಂದ ಬಸಂತ ಪಂಚಮಿ ಅಂಗವಾಗಿ ಇಲ್ಲಿಯ ಬಸವ ಮುಕ್ತಿ ಮಂದಿರದಲ್ಲಿ ಇರುವ ಗಾನಯೋಗಿ ಪಂಚಾಕ್ಷರ ಗವಾಯಿ ಸಂಗೀತ ವಿದ್ಯಾಲಯದಲ್ಲಿ ಉದಯೋನ್ಮುಖ ಕಲಾವಿದರಿಗೆ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಸಂಗೀತ ಆಲಿಕೆ ಆಸಕ್ತಿ ಬೆಳೆಸಿಕೊಳ್ಳಬೇಕು. ಹಾಡುಗಳನ್ನು ಹಾಡಬೇಕು ಎಂದು ಸಲಹೆ ಮಾಡಿದರು.
ಪಶು ಸಂಗೋಪನಾ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು. ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಅಧ್ಯಕ್ಷ ಪ್ರೊ. ಎಸ್.ವಿ. ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಂಭವಿ ಕಲ್ಮಠ, ರೇಣುಕಾ ಮಳ್ಳಿ ವಚನ ಸಂಗೀತ ನಡೆಸಿಕೊಟ್ಟರು. ಕಲಾವಿದ ರೋಷನಕುಮಾರ ರಮೇಶ ಕೋಳಾರ ತಬಲಾ ಸೊಲೊದಲ್ಲಿ ಅನೇಕ ಕಾಯ್ದಾ, ಮುಖಡಾ, ಚಕ್ರಾಧಾರ ಬೋಲ್ಗಳನ್ನು ನುಡಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
ರಾಷ್ಟ್ರಮಟ್ಟದ ಸರೆಗಮಪ ಸ್ಪರ್ಧೆಗೆ ಆಯ್ಕೆಯಾದ ಶಿವಾನಿ ಸ್ವಾಮಿ ರಾಗ ಮಾಲಕಂಸ, ಕಿರವಾನಿ ರಾಗ ಪ್ರಸ್ತುತಪಡಿಸಿದರು. ಲಘು ಶಾಸ್ತ್ರೀಯ ಸಂಗೀತದಲ್ಲಿ ವಚನ, ಗಜಲ್, ಭಕ್ತಿ ಗೀತೆ, ಕನ್ನಡ, ಹಿಂದಿ ಹಾಗೂ ಮರಾಠಿ ಹಾಡುಗಳನ್ನು ಹಾಡಿ ರಂಜಿಸಿದರು. ರಾಜೇಂದ್ರಸಿಂಗ್ ಪವಾರ್ ಹಾಗೂ ವಿನಾಯಕ ಚೌಧರಿ ಹಾರ್ಮೋನಿಯಂ ನುಡಿಸಿದರೆ, ರಮೇಶ ಕೊಳಾರ ತಬಲಾ ಸಾಥ್ ನೀಡಿದರು.