ಬಸವಕಲ್ಯಾಣ: ‘ಪುಸ್ತಕಗಳು ಜ್ಞಾನ ನೀಡುವ ಜತೆಗೆ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿ ಆಗಿವೆ’ ಎಂದು ತಹಶೀಲ್ದಾರ್ ಶಿವಾನಂದ ಮೇತ್ರೆ ಹೇಳಿದ್ದಾರೆ.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗ್ರಂಥಾಲಯಗಳು ಓದುಗರ ಮತ್ತು ಪುಸ್ತಕಗಳ ಮಧ್ಯೆ ಆಪ್ತ ಸಂಬಂಧ ಬೆಳೆಸುತ್ತವೆ. ಆದ್ದರಿಂದ ಗ್ರಂಥಾಲಯಗಳ ಉಪಯೋಗ ಪಡೆದುಕೊಳ್ಳಬೇಕು. ಕೋವಿಡ್ ಕಾಲದಲ್ಲಿ ಪುಸ್ತಕಗಳು ಸಂಗಾತಿ ಆಗಿದ್ದವು. ಪುಸ್ತಕ ಓದುವುದರಿಂದ ಮಾನಸಿಕ ಒತ್ತಡವೂ ನಿವಾರಣೆ ಆಗುತ್ತದೆ’ ಎಂದರು.
ಉಪನ್ಯಾಸಕ ಭೀಮಾಶಂಕರ ಬಿರಾದಾರ ಮಾತನಾಡಿ, ‘ಸಾಹಿತ್ಯ, ಸಂಸ್ಕೃತಿ, ಸಮಾಜ, ಮಾನವ ವರ್ತನೆ, ರಾಜಕಾರಣ, ಆರ್ಥಿಕ ವ್ಯವಸ್ಥೆಯ ಕ್ರಮಬದ್ಧ ವಿಶ್ಲೇಷಣೆ ಹಾಗೂ ಪ್ರಬುದ್ಧ ಚಿಂತನಾ ಕ್ರಮ ಬೆಳೆಸಿಕೊಳ್ಳಲು ಶ್ರೇಷ್ಠ ಕೃತಿಗಳ ಅಧ್ಯಯನದಿಂದ ಸಾಧ್ಯ. ಅಂಥ ಗ್ರಂಥಗಳು ಗ್ರಂಥಾಲಯಗಳಲ್ಲಿ ಲಭ್ಯವಾಗುತ್ತವೆ’ ಎಂದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಾಲಯ ಅಧಿಕಾರಿ ಸಿದ್ಧಾರ್ಥ ಭಾವಿಕಟ್ಟಿ ಮಾತನಾಡಿ, ‘ಗ್ರಂಥಾಲಯ ಮತ್ತು ಗ್ರಂಥಗಳ ಕುರಿತು ಓದುಗರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನವೆಂಬರ್ 14 ರಿಂದ 20 ರವರೆಗೆ ಗ್ರಂಥಾಲಯ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಗ್ರಂಥಾಲಯಗಳಿಗೆ ಹೆಚ್ಚು ಜನರು ಬರುವಂತಾಗಬೇಕು. ಮೊಬೈಲ್ ಸಂಸ್ಕೃತಿಯಿಂದ ಪುಸ್ತಕ ಸಂಸ್ಕೃತಿಗೆ ಎಲ್ಲರೂ ಬರಬೇಕಾಗಿದೆ. ಈ ಬಗ್ಗೆ ಸಪ್ತಾಹದಲ್ಲಿ ತಿಳಿವಳಿಕೆ ನೀಡಲಾಗುತ್ತದೆ’ ಎಂದರು.
ಡಿಜಿಟಲ್ ಗ್ರಂಥಾಲಯಕ್ಕೆ ಹೆಚ್ಚು ನೋಂದಣಿ ಮಾಡಿಸಿದ ನಿಂಗಪ್ಪ ತುಂಬಗಿ, ಓದುಗರಾದ ಕವಿರಾಜ ಕಿಣಗಿ ಶಿವಪುರ, ಪಂಚಾಕ್ಷರಿ ಹಿರೇಮಠ, ನಿರ್ಮಲಾ ಶೆಟಗಾರ ಅವರನ್ನು ಸನ್ಮಾನಿಸಲಾಯಿತು.