ಚಿಟಗುಪ್ಪ: ಮನ್ನಾಎಖ್ಖೇಳಿ ಗ್ರಾಮದಿಂದ ಬೋರಾಳ ಮಾರ್ಗವಾಗಿ ಚಿಂಚೋಳಿ ವರೆಗೆ ನಿತ್ಯ ಬಸ್ ಸಂಚಾರ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ತಹಶೀಲ್ದಾರ್ ರವೀಂದ್ರ ದಾಮಾ ಹೇಳಿದರು.
ತಾಲ್ಲೂಕಿನ ಬೊರಾಳ ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಚರಂಡಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳ ನಿರ್ವಹಣೆಯತ್ತ ಕಾಳಜಿ ವಹಿಸಬೇಕು. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದರು.
ವಿದ್ಯುತ್ ತಂತಿಗಳು ಮನೆ ಮೇಲ್ಛಾವಣಿ, ತೋಟಗಳಲ್ಲಿನ ಬೆಳೆಗಳಿಗೆ ತಗುಲುವಂತೆ ಜೋತು ಬಿದ್ದಿವೆ, ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಸೂಚಿಸಿದರು.
ಒಟ್ಟು 18 ವಿವಿಧ ಇಲಾಖೆಯ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸ ದಂತೆ ಅರ್ಜಿಗಳು ಸಲ್ಲಿಕೆಯಾಗಿದ್ದು,
ಕಂದಾಯ ಇಲಾಖೆಯ ಸಿ-ಫಾರ್ಮ್ನ 3, ಚರಂಡಿ ಸಮಸ್ಯೆಯ 3, ಕೆಇಬಿಯ 1, ವಿಧವಾ, ಸಂಧ್ಯಾ ಸುರಕ್ಷಾ ವೇತನದ 5, ಇತರ ವಿಷಯಗಳ ಸಂಬಂಧ 6 ಅರ್ಜಿಗಳು ಸೇರಿ 18 ಅರ್ಜಿಗಳು ಸಲ್ಲಿಕೆಯಾದವು. ಈ ಪೈಕಿ 5 ಅರ್ಜಿಗಳನ್ನು ಸ್ಥಳದಲ್ಲಿ ವಿಲೇವಾರಿ ಮಾಡಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿ ವೆಂಕಟ ಸಿಂಧೆ, ಗ್ರಾ.ಪಂ ಅಧ್ಯಕ್ಷ ನಾಗಪ್ಪ ಅರ್ಕಿ, ಉಪಾಧ್ಯಕ್ಷೆ ಸುವರ್ಣ, ಗ್ರಾಂ.ಪಂ ಸದಸ್ಯ ಸಂತೋಷ, ಕಾಶಿನಾಥ ಪವಾರ್ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.