ಬೀದರ್: ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಕಲಿಕೆಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಸರ್ಕಾರದ ನಿರ್ಧಾರ ಖಂಡಿಸಿ ಅಂಗನವಾಡಿ ಸಂಘಟನೆಯವರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಎಲ್ಕೆಜಿ, ಯುಕೆಜಿ ಕಲಿಕೆಗೆ ಅಂಗನವಾಡಿ ಶಿಕ್ಷಕಿಯರನ್ನು ಬಳಸಿಕೊಳ್ಳಬೇಕು. ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಪೂರ್ವ ಪ್ರಾಥಮಿಕ ಶಿಕ್ಷಣದ ಜವಾಬ್ದಾರಿ ಕೊಡಬೇಕೆಂದು ಹಿಂದಿನಿಂದಲೂ ಸರ್ಕಾರ ಹೇಳುತ್ತ ಬರುತ್ತಿದೆ. ತಜ್ಞರು ಅದಕ್ಕೆ ಒತ್ತು ಕೊಟ್ಟಿದ್ದಾರೆ. ಈಗ ಅತಿಥಿ ಶಿಕ್ಷಕರ ನಿಯೋಜನೆಗೆ ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಸರ್ಕಾರದ ನಿರ್ಧಾರದ ವಿರುದ್ಧ ಜೂನ್ 3ರಂದು ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿ ಕೆಲಸವನ್ನು ನಿಲ್ಲಿಸಿ ಕಲಬುರಗಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬೀದರ್ ಜಿಲ್ಲಾ ಅಂಗನವಾಡಿ ಸಂಘಟನೆ ಅಧ್ಯಕ್ಷೆ ಸುಶೀಲಾ ಹತ್ತಿ, ಪ್ರಧಾನ ಕಾರ್ಯದರ್ಶಿ ಜೈಶ್ರೀ ಮೆಂಡೊಳೆ, ಖಜಾಂಚಿ ಶಾಂತಾ ನಾಗೂರೆ, ಶ್ರೀದೇವಿ ಚುಡೆ, ಉಷಾ ಗುತ್ತೇದಾರ, ಶಕುಂತಲಾ ಸೋನಿ ಮತ್ತಿತರರು ಹಾಜರಿದ್ದರು.