ಭಾಲ್ಕಿ: ಕೋವಿಡ್-19 ಸೋಂಕು ಕಡಿಮೆ ಆಗದದಿದ್ದರು ಸಹ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿರುವುದು ಅಕ್ಷಮ್ಯ ಅಪರಾಧ. ಕೂಡಲೇ ಮದ್ಯ ಮಾರಾಟ ಸ್ಥಗಿತಗೊಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.
ಇಲ್ಲಿಯ ಬಿಕೆಐಟಿ ಕಾಲೇಜಿನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಲಾಕ್ಡೌನ್ ಸಂದರ್ಭದ 40 ದಿನಗಳಲ್ಲಿ ಸಾಕಷ್ಟು ಜನರು ಕುಡಿತದ ಚಟದಿಂದ ದೂರಾಗಿದ್ದರು, ಈ ಸುಸಂದರ್ಭವನ್ನು ಬಳಸಿಕೊಂಡು ರಾಜ್ಯ ಸರ್ಕಾರ ಸಂಪೂರ್ಣ ಮದ್ಯ ನಿಷೇಧ ಜಾರಿಗೊಳಿಸಬಹುದಿತ್ತು. ಈಗ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ಅದೇ
ಷ್ಟೋ ಜನರು ಸುಡು ಬಿಸಿಲಿನಲ್ಲಿ, ಅಂತರ ಕಾಪಾಡಿಕೊಳ್ಳದೆಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇದರಿಂದ ಲಾಕ್
ಡೌನ್ನ ಉದ್ದೇಶ ವಿಫಲ
ವಾಗಿದೆ. ಬಡ ಮಹಿಳೆಯರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಸಂಬಂಧ ರಾಜ್ಯದ ಜನತೆಗೆ ಸರ್ಕಾರ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದರು.
ಆರ್ಥಿಕತೆಯ ಬೆನ್ನೆಲುಬು ಆಗಿರುವ ಕಾರ್ಮಿಕರು ಪೂರ್ವ ಯೋಜನೆ ಇಲ್ಲದೆ ಲಾಕ್ಡೌನ್ ಘೋಷಿಸಿದ್ದರಿಂದ
ರಾಜ್ಯದ ವಿವಿಧ ಜಿಲ್ಲೆ, ಹೊರ ರಾಜ್ಯಗಳಲ್ಲಿ ಸಿಲುಕಿದ್ದಾರೆ. ಅವರ ಬಳಿ ಹಣ ಇಲ್ಲ. ಊಟಕ್ಕೂ ಗತಿ ಇಲ್ಲದಂತಹ ಸ್ಥಿತಿ ಇದೆ. ಅಂತಹದರಲ್ಲಿ ಅವರಿಂದ ಎರಡ್ಮೂರು ಪಟ್ಟು ಹೆಚ್ಚಿಗೆ ಸಾರಿಗೆಯ ಟಿಕೆಟ್ ದರ ವಸೂಲಿ ಮಾಡಿರುವುದು ದುರ್ದೈವದ ಸಂಗತಿ ಎಂದು ಅಸಮಾಧಾನ ಹೊರ ಹಾಕಿದರು.
ಎಲ್ಲ ಕಾರ್ಮಿಕರಿಗೆ ತಮ್ಮ-ತಮ್ಮ ಗ್ರಾಮಗಳಿಗೆ ತೆರಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಉಚಿತ ರೈಲ್ವೆ, ಸಾರಿಗೆ ವ್ಯವಸ್ಥೆ ಮಾಡಬೇಕು. ಸರ್ಕಾರದ ಬೊಕ್ಕಸ ದೀವಾಳಿ ಆಗಿದ್ದರೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ದೇಣಿಗೆ ನೀಡಿ ಸಾರಿಗೆ ದರದ ಖರ್ಚನ್ನು ಭರಿಸುತ್ತೇವೆ. ಲಾಕ್ಡೌನ್ ನ ಯಶಸ್ಸಿಗೆ ಜವಾಬ್ದಾರಿಯುತ
ಪ್ರತಿಪಕ್ಷವಾಗಿ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಆದರೆ, ಕಾರ್ಮಿಕರ, ಬಡವರ, ವಿಷಯದಲ್ಲಿ ಸರ್ಕಾರ ಅಮಾನುಷವಾಗಿ ನಡೆದುಕೊಂಡರೆ ಕಾಂಗ್ರೆಸ್ ಪಕ್ಷದ ನಾಯಕರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು
ಎಚ್ಚರಿಸಿದರು.
ಜಿಲ್ಲೆಯ ವಿವಿಧೆಡೆ ಬೆಳಕಿಗೆ ಬರುತ್ತಿರುವ ಕಳ್ಳಭಟ್ಟಿ ಸಾರಾಯಿ ತಡೆಗೆ ಕಡಿವಾಣ ಹಾಕಬೇಕು. ಸರ್ಕಾರ ಕೊರೊನಾ ವಾರಿಯರ್ಸ್ ಗೆ ಗುಣಮಟ್ಟದ ಪಿಪಿಐ ಕಿಟ್, ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಪೂರೈಸುವಲ್ಲಿ ವಿಫಲವಾಗಿದೆ. ಕೊರೊನಾದ ಸಂಕಷ್ಟದ ಸಮಯದಲ್ಲಿ ಬಡವರ ಅಕ್ಕಿ, ಗೋಧಿ, ತೊಗರಿ ಬೇಳೆಗೆ ಕನ್ನ ಹಾಕಿರುವ ಅಪರಾಧಿಗಳು ಎಷ್ಟೇ ದೊಡ್ಡವರಾದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಪಾರದರ್ಶಕ ತನಿಖೆ ನಡೆಯಬೇಕು ಎಂದು
ಅವರು ಈ ವೇಳೆ
ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.