ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಮಾರುಕಟ್ಟೆಯಲ್ಲಿ ಶತಕ ಬಾರಿಸಿದ ಬದನೆಕಾಯಿ; ಹಿಂಜರಿಯದ ನುಗ್ಗೆಕಾಯಿ

Last Updated 22 ಅಕ್ಟೋಬರ್ 2022, 19:31 IST
ಅಕ್ಷರ ಗಾತ್ರ

ಬೀದರ್‌: ದೀಪಾವಳಿ ಹಬ್ಬದ ಖರೀದಿ ಜೋರಾಗಿಯೇ ನಡೆದಿದೆ. ಹಬ್ಬದಲ್ಲಿ ನಾನಿಲ್ಲದೇ ಮಹಾಲಕ್ಷ್ಮಿದೇವಿಗೆ ನೈವೇದ್ಯವಿಲ್ಲ ಎಂದು ಅರಿತಿರುವ ತರಕಾರಿ ರಾಜ ಬೆಲೆಯ ಅಟ್ಟವೇರಿ ಕುಳಿತಿದ್ದಾನೆ. ಹಬ್ಬದ ಸಂದರ್ಭದಲ್ಲೇ ತರಕಾರಿ ಬೆಲೆ ಹೆಚ್ಚಳವಾಗಿರುವುದು ಗ್ರಾಹಕರಿಗೆ ಇನ್ನಷ್ಟು ಬಿಸಿ ಮುಟ್ಟಿಸಿದೆ.

ಪ್ರತಿ ಕ್ವಿಂಟಲ್‌ಗೆ ಕೊತ್ತಂಬರಿ ಬೆಲೆ ₹ 5 ಸಾವಿರ, ಪಾಲಕ್ ₹ 4 ಸಾವಿರ, ಬದನೆಕಾಯಿ, ಬೆಂಡೆಕಾಯಿ, ಹಿರೇಕಾಯಿ, ಡೊಣಮೆಣಸಿನ ಕಾಯಿ, ಚವಳೆಕಾಯಿ, ಆಲೂಗಡ್ಡೆ, ಮೆಣಸಿನಕಾಯಿ, ಎಲೆಕೋಸು ತಲಾ ₹ 2 ಸಾವಿರ, ಈರುಳ್ಳಿ ಹಾಗೂ ಕರಿಬೇವು ಬೆಲೆ ₹ 1 ಸಾವಿರ ಹೆಚ್ಚಳವಾಗಿದೆ.

ಬೆಳ್ಳುಳ್ಳಿ ಬೆಲೆ ಮಾತ್ರ ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರ ಇಳಿದಿದೆ. ಹೂಕೋಸು, ಗಜ್ಜರಿ, ಬೀನ್ಸ್, ಟೊಮೆಟೊ, ನುಗ್ಗೆಕಾಯಿ, ಸೌತೆಕಾಯಿ, ತುಪ್ಪದ ಹಿರೇಕಾಯಿ, ಮೆಂತೆ ಹಾಗೂ ಸಬ್ಬಸಗಿ ಬೆಲೆ ಸ್ಥಿರವಾಗಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ಬೀನ್ಸ್‌, ನುಗ್ಗೆಕಾಯಿ ₹ 120, ಹಿರೇಕಾಯಿ, ಡೊಣಮೆಣಸಿನ ಕಾಯಿ, ಕೊತ್ತಂಬರಿ, ಪಾಲಕ್, ತುಪ್ಪದ ಹಿರೇಕಾಯಿ, ಗಜ್ಜರಿ, ಹೂಕೋಸು ಬೆಲೆ ₹ 80 ಇದೆ. ತರಕಾರಿ ರಾಜ ಬದನೆಕಾಯಿ ಬೆಲೆ ಮಾರುಕಟ್ಟೆಯಲ್ಲಿ ಶತಕ ಬಾರಿಸಿ ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದ್ದಾನೆ.

‘ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವ ಕಾರಣ ತರಕಾರಿ ಬೆಲೆಯಲ್ಲಿ ಏರುಪೇರಾಗಿದೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಬಂದಿರುವುದರಿಂದ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಹೈದರಾಬಾದ್‌ನಿಂದ ಬೀಟ್‌ರೂಟ್‌, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಗಜ್ಜರಿ, ನುಗ್ಗೆಕಾಯಿ, ಚವಳೆಕಾಯಿ, ಪಡವಲಕಾಯಿ, ಹಾಗಲಕಾಯಿ ನಗರದ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಮಾರುಕಟ್ಟೆಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT