ಬೀದರ್: ಜಮಾಅತೆ ಇಸ್ಲಾಮಿ ಹಿಂದ್ ಅಕ್ಟೋಬರ್ 23ರಿಂದ ನವೆಂಬರ್ 5ರ ವರೆಗೆ ‘ಪ್ರವಾದಿ ಮಹಮ್ಮದ್– ಮಾನವತೆಯ ಮಾರ್ಗದರ್ಶಕ’ ಎನ್ನುವ ಘೋಷವಾಕ್ಯದೊಂದಿಗೆ ರಾಜ್ಯದಾದ್ಯಂತ ಅಭಿಯಾನ ಹಮ್ಮಿಕೊಂಡಿದೆ.
ರಬೀವುಲ್ ಅವ್ವಲ್ ಪ್ರವಾದಿ ಮಹಮ್ಮದ್ ಜನಿಸಿರುವ ತಿಂಗಳಾಗಿದೆ. ಅವರ ಪಾವನ ಜೀವನ, ಅತ್ಯುನ್ನತ ಗುಣ, ನಡತೆಗಳು ಹಾಗೂ ಮಹತ್ವದ ಸಂದೇಶ ಸಾರಲಾಗುವುದು. ವೈಯಕ್ತಿಕ ಭೇಟಿ, ಸಾರ್ವಜನಿಕ ಚರ್ಚೆ, ಚಿಕ್ಕದಾದ ಸಭೆ ನಡೆಸಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗುವುದು.
ಬೀದರ್ನಲ್ಲಿ ಶುಕ್ರವಾರ ವಿವಿಧ ಮಸೀದಿಗಳಲ್ಲಿ ಪ್ರವಚನ ನಡೆಯಲಿದೆ. ಅಭಿಯಾನದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ, ಸರ್ಕಾರಿ ಅಧಿಕಾರಿ ಹಾಗೂ ಶಿಕ್ಷಕ ವೃಂದದವರನ್ನು ಭೇಟಿ ಮಾಡಿ ಸೀರತ್ ಸಾಹಿತ್ಯ ನೀಡಲಾಗುವುದು. ಮನೆ-ಮನೆಗೆ ಭೇಟಿ ನೀಡಿ ಕನ್ನಡ, ಇಂಗ್ಲಿಷ್ ಹಾಗೂ ಉರ್ದುವಿನಲ್ಲಿರುವ ಕರಪತ್ರಗಳನ್ನು ವಿತರಿಸಲಾಗುವುದು.
ಅಲ್-ಅಮೀನ್ ಕಾಲೇಜಿನಲ್ಲಿ ನವೆಂಬರ್ 1 ರಂದು ಬೆಳಿಗ್ಗೆ 11 ಗಂಟೆಗೆ ಕನ್ನಡ, ಹಿಂದಿ ಹಾಗೂ ಉರ್ದು ಕವಿಗೋಷ್ಠಿ ನಡೆಯಲಿದೆ. ನ.2 ರಂದು ಬೆಳಿಗ್ಗೆ 7 ಗಂಟೆಗೆ ಚೌಬಾರಾದಿಂದ ಫತೇಹ್ ದರ್ವಾಜಾ ಅವರಿಗೆ ಸ್ವಚ್ಛತಾ ಅಭಿಯಾನ ನಡೆಸಲಾಗುವುದು.
‘ಪ್ರವಾದಿ ಮುಹಮ್ಮದ್-ಮಾನವತೆಯ ಮಾರ್ಗದರ್ಶಕ’ ವಿಷಯವಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತರು ಎರಡು ಸಾವಿರ ಶಬ್ದಗಳಲ್ಲಿ ಬರೆದು ನವೆಂಬರ್ 5ರೊಳಗೆ ಮೇಲ್ ಮೂಲಕ ಕಳಿಸಿಕೊಡಬೇಕು. ವಿಜೇತರಿಗೆ ಪ್ರಥಮ ಬಹುಮಾನ ₹ 5 ಸಾವಿರ, ದ್ವಿತೀಯ ಬಹುಮಾನ 3 ಸಾವಿರ ಹಾಗೂ ತೃತೀಯ ಬಹುಮಾನ ₹ 1 ಸಾವಿರ ಹಾಗೂ ಆರು ಸಮಾಧಾನಕರ ನಗದು ಬಹುಮಾನ ನೀಡಲಾಗುವುದು.
ವಿವರಗಳಿಗೆ (ಮೊಬೈಲ್ 97391 90102) ಎಂದು ಅಭಿಯಾನದ ಸಂಚಾಲಕ ರಫೀಕ್ ಅಹ್ಮದ್ ಹಾಗೂ ಜಮಾತೆ ಇಸ್ಲಾಮಿ ಹಿಂದ್ ಬೀದರ್ನ ಅಧ್ಯಕ್ಷ ಮುಹಮ್ಮದ್ ನಿಜಾಮುದ್ದೀನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.