ಔರಾದ್: ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಇಲ್ಲಿಯ ಹಿಂದುಸ್ತಾನ್ ಪೆಟ್ರೋಲ್ (ಎಚ್ಪಿ) ಬಂಕ್ ಎದುರು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಕಾಂಗ್ರೆಸ್ ಉಸ್ತುವಾರಿ ಕನ್ನಿರಾಮ ರಾಠೋಡ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ದೇಶದಲ್ಲಿ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ನಿರಂತರವಾಗಿ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಹೆಚ್ಚುತ್ತಲೇ ಇದೆ. ಈಗ ದೇಶದಲ್ಲಿ ಪೆಟ್ರೋಲ್ ಬೆಲೆ ₹100 ಗಡಿ ದಾಟಿದರೂ ಸರ್ಕಾರ ಬಾಯಿ ಮುಚ್ಚಿ ಕುಳಿತಿದೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ ದೂರಿದರು.
ಪಟ್ಟಣ ಪಂಚಾಯಿತಿ ಸದಸ್ಯ ಬಂಟಿ ದರಬಾರೆ, ಡಾ.ಫಯಾಲ್ ಅಲಿ ಮಾತನಾಡಿ, ‘ದೇಶದಲ್ಲಿ ಅಡುಗೆ ಅನಿಲ ದರ ಹೆಚ್ಚಿದೆ. ರಾಜ್ಯ ಸರ್ಕಾರ ವಿದ್ಯುತ್ ದರ ಹೆಚ್ಚಿಸಲು ಹೊರಟಿದೆ. ಬೀಜ ಹಾಗೂ ರಸಗೊಬ್ಬರಗಳ ದರ ಹೆಚ್ಚಿಸಿ ಬಡವರು ಹಾಗೂ ರೈತರಿಗೆ ಅನ್ಯಾಯ ಮಾಡುತ್ತಿರುವ ಈ ಸರ್ಕಾರಗಳು ಬಹಳ ದಿನ ಉಳಿಯುವುದಿಲ್ಲ’ ಎಂದರು.
ತಾಲ್ಲೂಕು ಕಾಂಗ್ರೆಸ್ ವಕ್ತಾರ ಸಾಯಿಕುಮಾರ ಘೋಡ್ಕೆ ಮಾತನಾಡಿ, ‘ಸರ್ಕಾರ ಕೋವಿಡ್ ಸೋಂಕು ನಿರ್ವಹಣೆಯಲ್ಲಿ ವಿಫಲವಾಗಿದೆ. ಕೋವಿಡ್ 2ನೇ ಅಲೆ ಬರುವ ಬಗ್ಗೆ ತಜ್ಞರು ಸಲಹೆ ನೀಡಿದರೂ ಸರ್ಕಾರ ನಿರ್ಲಕ್ಷ್ಯಿಸಿದ ಕಾರಣ ಇಂದು ಅನೇಕ ಜನ ತಮ್ಮ ಆಪ್ತರು, ಬಂಧು ಬಳಗದವರನ್ನು ಕಳೆದುಕೊಳ್ಳಬೇಕಾಯಿತು’ ಎಂದು ದೂರಿದರು.
‘ಜಿಲ್ಲೆ ಹಾಗೂ ತಾಲ್ಲೂಕಿನ ಜನ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಜನರಿಗೆ ಸಮಯಕ್ಕೆ ಸರಿಯಾಗಿ ಪಡಿತರ ಧಾನ್ಯ ಸಿಗುತ್ತಿಲ್ಲ. ಬಿತ್ತನ ಬೀಜಕ್ಕಾಗಿ ಪರದಾಡಬೇಕಿದೆ. ಬೀಜ ದುಬಾರಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ’ ಎಂದು ಅವರು ಅಸಮಾಧಾನ ಹೊರ ಹಾಕಿದರು.