ಬೀದರ್: ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಮೇಲಿನ ಹಲ್ಲೆ ಘಟನೆಯನ್ನು ಖಂಡಿಸಿ ನಗರಸಭೆ ಸಿಬ್ಬಂದಿ ನಗರದಲ್ಲಿ ಗುರುವಾರ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪೌರ ಸೇವಾ ನೌಕರರ ಸೇವಾ ಸಂಘದ ಮುಂದಾಳತ್ವದಲ್ಲಿ ಹರಳಯ್ಯ ವೃತ್ತದಿಂದ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಭಗತ್ಸಿಂಗ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಕಲಿ ಬಿಲ್ ಪಾವತಿಗೆ ಒಪ್ಪದ ಕಾರಣ ಪುರಸಭೆ ಸದಸ್ಯರಾದ ಆನಂದಕುಮಾರ ನಾಗೇಂದ್ರಪ್ಪ ಟೈಗರ್ ಹಾಗೂ ಶಶಿಕುಮಾರ ಮೇತ್ರಿ ಅವರು ಮುಖ್ಯಾಧಿಕಾರಿ ಅಭಯಕುಮಾರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಕತ್ತು ಹಿಸುಕಿ ಅವರ ಕೊಲೆಗೂ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಮುಖ್ಯಾಧಿಕಾರಿಗೆ ನ್ಯಾಯ ಒದಗಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ನೌಕರರಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಪೌರಾಯುಕ್ತ ರವೀಂದ್ರನಾಥ ಅಂಗಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಶೇಖರ ಮಠ, ಕಚೇರಿ ವ್ಯವಸ್ಥಾಪಕ ನಾಗಣ್ಣ ಪರೀಟ್, ಕರ್ನಾಟಕ ಪೌರ ಸೇವಾ ನೌಕರರ ಸೇವಾ ಸಂಘದ ಬೀದರ್ ಶಾಖೆಯ ಅಧ್ಯಕ್ಷ ಲೋಕೇಶ ರಾ. ಯಾದಗಿರಿ, ಕಾರ್ಯದರ್ಶಿ ಸುಭಾಷ ಮನೋಹರ ಭಾಗವಹಿಸಿದ್ದರು.