ಬೀದರ್: ‘ಪರಿಶ್ರಮಪಟ್ಟರೆ ಮಾತ್ರ ಗುಣಾತ್ಮಕ ಶಿಕ್ಷಣ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಆರಂಭದಿಂದಲೇ ಓದುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಸಾಧನೆ ಕಷ್ಟವಾಗಲಾರದು’ ಎಂದು ಕರ್ನಾಟಕ ಪದವಿ ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಚಲುವಾ ಹೇಳಿದರು.
ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಬಿಎ, ಬಿಕಾಂ, ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಪಾಲಕರ ಸಭೆ ಹಾಗೂ ನೂತನ ಶಿಕ್ಷಣ ನೀತಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾಲೇಜಿನಲ್ಲಿ ವಿದ್ಯಾರ್ಥಿಗಳು ಯಾವುದೇ ರೀತಿಯ ಗುಂಪುಗಾರಿಕೆ, ಕಾಲಹರಣ, ಕ್ಯಾಂಟಿನ್ನಲ್ಲಿ ಹೆಚ್ಚು ಸಮಯ ಕಳೆಯುವುದು ಸರಿಯಲ್ಲ. ಕಾಲೇಜಿನ ಉಪನ್ಯಾಸಕರ ವಾಟ್ಸ್ಅಪ್ ಗ್ರೂಪ್ಗೆ ಸರಿಯಾಗಿ ಸ್ಪಂದಿಸುವ ಮೂಲಕ ಶಿಕ್ಷಣ ಪಡೆಯಬೇಕು. ನೂತನ ಶಿಕ್ಷಣ ನೀತಿ ಜಾರಿಯಾಗಿದ್ದರಿಂದ ಕೆಲ ಬದಲಾವಣೆಗಳಾಗಿವೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವೂ ಆಗಿದೆ’ ಎಂದರು.