ಬೀದರ್: ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದ ರೈತ ಗುರುಲಿಂಗಪ್ಪ ಮೇಲ್ದೊಡ್ಡಿ ಅವರು 2020–21ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಸರ್ಕಾರವು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಬಹು ಬೆಳೆ ಹಾಗೂ ದ್ವಿದಳ ಧಾನ್ಯ ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ.
‘ಹೊಲದಲ್ಲಿ ಉದ್ದು, ಹೆಸರು, ಜೋಳ, ಕವಳೆ, ನವಣೆ ಬೆಳೆದಿದ್ದೇನೆ. ತೋಟಗಾರಿಕೆ ಬೆಳೆಗಳಾದ ಬಾಳೆ, ಪಪ್ಪಾಯ, ಪೇರಲ, ಲಿಂಬೆ, ಹೂವು ಸಹ ಬೆಳೆದಿದ್ದೇನೆ. ಬಹು ಬೆಳೆ ಬೆಳೆದಿರುವ ಕಾರಣ ಯಾವುದರಲ್ಲೂ ಹಾನಿಯಾಗಿಲ್ಲ. ಎಲ್ಲ ಬೆಳೆಗಳಿಂದಲೂ ಆದಾಯ ಪಡೆದುಕೊಳ್ಳುತ್ತಿದ್ದೆನೆ’ ಎಂದು ಗುರುಲಿಂಗಪ್ಪ ತಿಳಿಸಿದ್ದಾರೆ.
ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಸ್ಪೀ) ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಸಲ್ಲಿಸಿದವರಿಗೆ ನೀಡುವ 2017ನೇ ಸಾಲಿನ ಎಲ್.ಎಂ.ಪಟೇಲ್ ಪ್ರಶಸ್ತಿ ಲಭಿಸಿದೆ. ಮುಂಬೈನಲ್ಲಿ 2017ರ ಡಿಸೆಂಬರ್ 30ರಂದು ಕೇಂದ್ರದ ತೋಟಗಾರಿಕೆ ಇಲಾಖೆಯ ನಿವೃತ್ತ ಆಯುಕ್ತ ಪ್ರೊ.ಕೆ.ಎಲ್.ಚಂದಾ ಪ್ರಶಸ್ತಿ ಪ್ರದಾನ ಮಾಡಿದ್ದರು.