ಬೀದರ್: ‘ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಜ.21,22ರಂದು ನಗರದ ಸಾಯಿ ಆದರ್ಶ ಶಾಲೆ ಮೈದಾನದಲ್ಲಿ ‘ರಾಮೋತ್ಸವ’ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ರಾಮನ ಭಕ್ತಿಯ ಗಂಗೆಯಲ್ಲಿ ಮಿಂದೇಳಬೇಕು’ ಎಂದು ಜಿಲ್ಲಾ ಮಠಾಧೀಶರ ಒಕ್ಕೂಟದ ತಡೋಳಾ ರಾಜೇಶ್ವರ ಶಿವಾಚಾರ್ಯರು ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಮಠಾಧೀಶರ ಒಕ್ಕೂಟ ಹಾಗೂ ರಾಮಲೀಲಾ ಉತ್ಸವ ಸಮಿತಿ ಸಹಯೋಗದಲ್ಲಿ ಎರಡು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.
ಜ.21ರಂದು ಸಂಜೆ 5ಕ್ಕೆ ಸಂಗೀತ ದರ್ಬಾರ್ ನಡೆಯಲಿದೆ. ಬೆಂಗಳೂರಿನ ತಂಡ ಹಾಗೂ ಜಿಲ್ಲೆಯ ಸ್ಥಳೀಯ ಕಲಾವಿದರು ಕಾರ್ಯಕ್ರಮ ನಡೆಸಿಕೊಡುವರು. ರಾತ್ರಿಯಿಡೀ ಜಾಗರಣೆ ನಡೆಯಲಿದೆ. ಜ.22ರಂದು ಸಂಜೆ 5ಕ್ಕೆ ರಾಮನ ಮೂರ್ತಿಯ ಅಭಿಷೇಕ, ಸಾಮೂಹಿಕ ಅಭಿಷೇಕ, ಹನುಮಾನ್ ಚಾಲೀಸಾ ಪಠಣ ನಡೆಯಲಿದೆ. 498 ವರ್ಷಗಳ ನಂತರ ಭವ್ಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದ್ದು, ಸಾಂಕೇತಿಕವಾಗಿ 498 ಸ್ತಬ್ಧಚಿತ್ರಗಳು, 498 ಮಕ್ಕಳು ಶ್ರೀರಾಮನ ವೇಷ ಧರಿಸುವರು. ಸಾಕ್ಷಾತ್ ರಾಮನೇ ಬಂದ ಎಂಬಂತೆ 16 ನಿಮಿಷಗಳ ‘ರಾಮಕಥಾ’ ಕಾರ್ಯಕ್ರಮವೂ ಜರುಗಲಿದೆ ಎಂದು ವಿವಿರಿಸಿದರು.
ಜೋಪಡಿಗಳಿಂದ ಮಹಲ್ವರೆಗೆ ಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆಯುತ್ತಿವೆ. ಎಲ್ಲೆಡೆ ರಾಮನ ಭಕ್ತಿ ತುಂಬಿದೆ. ಜಾತಿ, ಮತ, ಪಂಥ ಎಂಬ ಭೇದವಿಲ್ಲದೆ ರಾಷ್ಟ್ರ ನಿರ್ಮಾಣ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿದ್ದಾರೆ. ಜಗತ್ತು ರಾಮನನ್ನು ಸ್ವೀಕರಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಎರಡೂ ದಿನ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು’ ಎಂದು ಅವರು ಮನವಿ ಮಾಡಿದರು.
1992ರ ಘಟನೆ ನಂತರ ರಾಮನ ಹೆಸರು ಹೇಳುವುದು ಬಹಳ ಕಷ್ಟವಾಗಿತ್ತು. ಭಯದ ವಾತಾವರಣ ನಿರ್ಮಾಣವಾಗಿತ್ತು. ಆಗ ಸೌಹಾರ್ದ ಸಭೆಗಳನ್ನು ನಡೆಸಿದ್ದೆವು. ಈಗ ಫಲ ಸಿಗುತ್ತಿದೆ ಎಂದರು.
ಮಠಾಧೀಶರ ಒಕ್ಕೂಟದ ಶಂಭುಲಿಂಗ ಶಿವಾಚಾರ್ಯ, ಶಾಂತಲಿಂಗ ಶಿವಾಚಾರ್ಯ, ಸಿದ್ದೇಶ್ವರ ಸ್ವಾಮೀಜಿ, ಹಾವಗಿ ಶಿವಾಚಾರ್ಯ, ರಾಮಲೀಲಾ ಉತ್ಸವ ಸಮಿತಿಯ ಪ್ರಮುಖರಾದ ಗುರುನಾಥ ಕೊಳ್ಳೂರ, ಬಾಬುವಾಲಿ, ನಾಗರಾಜ ಕರ್ಪೂರ, ಈಶ್ವರ ಸಿಂಗ್ ಠಾಕೂರ್, ಮಹೇಶ್ವರ ಸ್ವಾಮಿ, ಚಂದ್ರಶೇಖರ ಗಾದಾ, ಸುಭಾಷ ಕಲ್ಲೂರ, ರಾಮಕೃಷ್ಣನನ್ ಸಾಳೆ, ಗಿರಿರಾಜ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.