ಹುಮನಾಬಾದ್: ಪರಿಸರ ಸಂರಕ್ಷಣೆ ಮತ್ತು ವಾಯುಮಾಲಿನ್ಯ ತಡೆಗಟ್ಟಲು ಗಿಡ ಬೆಳೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಪಾಟೀಲ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ ವತಿಯಿಂದ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಲ್ಲಿನ ವಿವಿಧ ಇಲಾಖೆಯವರು, ಸಂಘ, ಸಂಸ್ಥೆಗಳು, ಸಾರ್ವಜನಿಕರು ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಪಟ್ಟಣದಲ್ಲಿ 1,800, ಹಳ್ಳಿಖೇಡ (ಬಿ) 1,900 ಮತ್ತು ರಾಷ್ಟ್ರೀಯ ಹೆದ್ದಾರಿ ನಿಂಬುರನಿಂದ ನಿರ್ಣಾ ರವೆಗೆ 1800 ಸಸಿಗಳು ಸೇರಿದಂತೆ ಒಟ್ಟು 6.8 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದ್ದಾರೆ. ಅಲ್ಲದೆ, ಸಸಿಗಳು ಹಾಳಾಗದಂತೆ ಬೆಳೆಸಿ ಪೋಷಿಸಬೇಕು ಎಂದು ಹೇಳಿದರು.
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿ ತಾಲ್ಲೂಕಿನ 66 ಸಾವಿರ ರೈತರಿಗೆ ಸಸಿಗಳ ಕಿಟ್ ವಿತರಿಸುತ್ತಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ನಾಗಯ್ಯ ಹಿರೇಮಠ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಗೋವಿಂದ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿ ಬೀರೇಂದ್ರ ಸಿಂಗ್, ಎ.ಸಿ.ಎಫ್ ಎ.ಬಿ.ಪಾಟೀಲ, ಆರ್ಎಫ್ಒ ರಮೇಶ ಕನಕಟ್ಟ, ಸಂತೋಷ, ಶಾಂತವೀರ ಯಲಾಲ್, ಶಂಕರ ಕನಕ, ಶಿವಕುಮಾರ ಇದ್ದರು.