ಬೀದರ್: ಕೋವಿಡ್ ನಿಯಂತ್ರಣ ಕಾರ್ಯಾಚರಣೆಗೆ ಜಿಲ್ಲೆಯ ವಿವಿಧ ಕಾಲೇಜುಗಳ ಎನ್ಎಸ್ಎಸ್ ಘಟಕಗಳು, ರೆಡ್ ಕ್ರಾಸ್ ಸಂಸ್ಥೆ, ನೆಹರೂ ಯುವಕೇಂದ್ರ, ಯುವಕ ಸಂಘ ಹಾಗೂ ಇನ್ನಿತರ ಸಂಘ– ಸಂಸ್ಥೆಗಳ ಸಹಕಾರ ನೀಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರು ಬುಧವಾರ ಎನ್ಎಸ್ಎಸ್ ಸಂಯೋಜಕರು, ಯುಥ್ ಕ್ಲಬ್ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿ ಗಳನ್ನು ಆಹ್ವಾನಿಸಿ ಅವರೊಂದಿಗೆ ಸಭೆ ನಡೆಸಿ ಸಹಕಾರ ಕೋರಿದರು.
‘ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ಹಳ್ಳಿಹಳ್ಳಿಗೆ ಹೋಗಿ ಅಲ್ಲಿ ಪಿಡಿಒ, ಗ್ರಾ.ಪಂ ಕಾರ್ಯದರ್ಶಿಗಳ ಸಹಕಾರ ಪಡೆದು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು’ ಎಂದು ಮನವಿ ಮಾಡಿದರು.
ನೆಹರೂ ಯುವಕೇಂದ್ರದ ಅಧಿಕಾರಿ ಮಯೂರಕುಮಾರ ಗೋರ್ಮೆ, ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಕ್ಲಬ್ನ ಅಧ್ಯಕ್ಷೆ ಮಂಗಳಾ ಮರಕಲೆ, ಶ್ರೀ ವೀರಭದ್ರೇಶ್ವರ ಯುಥ್ ಕ್ಲಬ್ನ ಸತೀಶ ಬೀಳಕೋಟೆ, ಭಗತ್ ಸಿಂಗ್ ಯುಥ್ ಕ್ಲಬ್ನ ಅಂಬಾದಾಸ್ ಕೋರೆ, ರತ್ನದೀಪ ಕಸ್ತೂರೆ ಇದ್ದರು.