‘ಉದ್ಯಾನದ ಜಾಗ ನೋಂದಣಿ ಮಾಡಿಸಿಕೊಡದ್ದಕ್ಕೆ ಸುಳ್ಳು ಆರೋಪ’
‘ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರು ನಾನು ಬುಡಾ ಅಧ್ಯಕ್ಷನಾಗಿದ್ದಾಗ ಉದ್ಯಾನದ ಜಾಗ ನೋಂದಣಿ ಮಾಡಿಸಿಕೊಡುವಂತೆ ಕೇಳಿದ್ದರು. ಆ ಕೆಲಸ ನಾನು ಮಾಡಿಕೊಡಲಿಲ್ಲ. ಈ ಕಾರಣಕ್ಕಾಗಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂಬು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬುವಾಲಿ ಆರೋಪಿಸಿದ್ದಾರೆ. ಅರಳಿ ಅವರು ಎರಡು ಆಧಾರ್ ಕಾರ್ಡ್ಗಳನ್ನು ಹೊಂದಿದ್ದರು. ಅವರ ಎಂಎಲ್ಸಿ ಸದಸ್ಯತ್ವ ರದ್ದುಪಡಿಸಬೇಕು ಎಂದು ದೂರು ಕೊಟ್ಟಿದ್ದೆ. ಅದನ್ನು ಸಹಿಸಿಕೊಳ್ಳಲಾರದೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಬುಡಾದಲ್ಲಿ ನಡೆದ ಎರಡು ಸಭೆಗಳನ್ನು ಹೊರತುಪಡಿಸಿದರೆ ಎಲ್ಲ ಸಭೆಗಳಲ್ಲಿ ಅರಳಿ ಭಾಗವಹಿಸಿದ್ದರು. ಅವರ ಸಮ್ಮುಖದಲ್ಲೇ ಎಲ್ಲ ತೀರ್ಮಾನವಾಗಿದೆ. ಪ್ರತಿಯೊಂದಕ್ಕೂ ಬುಡಾ ಆಯುಕ್ತರು ಮನೆಗೆ ಬಂದು ವಿವರಿಸಬೇಕು ಎಂದು ಹೇಳುತ್ತಿದ್ದರು. ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಅರಳಿ ಕ್ರಿಮಿನಲ್ ಇದ್ದಾರೆ. ಅನೇಕ ಅಪರಾಧಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಅಧಿಕಾರ ದುರ್ಬಳಕೆ ಮಾಡಿಕೊಂಡು ನನಗೆ ಕಿರುಕುಳ ಕೊಡುತ್ತಿದ್ದಾರೆ. ವೈಯಕ್ತಿಕವಾಗಿ ದ್ವೇಷ ಸಾಧಿಸುತ್ತಿದ್ದಾರೆ. ಇವರ ಕುಟುಂಬದ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು ಅದನ್ನು ಬಯಲಿಗೆಳೆಯುತ್ತೇನೆ. ಅದಕ್ಕಾಗಿ ಕಾನೂನು ಹೋರಾಟ ನಡೆಸುವೆ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.