ಬೀದರ್: ಸುಗ್ಗಿಯ ಹಬ್ಬ ಸಂಕ್ರಾಂತಿ ಮತ್ತೆ ಬಂದಿದೆ. ಮನೆ ಮನೆಗಳಲ್ಲೂ ಹಬ್ಬದ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ.
ಬುಧವಾರ ಮಕರ ಸಂಕ್ರಾಂತಿ ಇದೆ. ಮಂಗಳವಾರ ಹೆಣ್ಣು ಮಕ್ಕಳ ಬೋಗಿ ಪ್ರಯುಕ್ತ ಮನೆಗಳಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.
ಮಹಿಳೆಯರು ಎಳ್ಳಿನ ಹಿಟ್ಟನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿ ಎಳ್ಳು, ಬೆಲ್ಲ, ಸಿಹಿ ತಿನಿಸು, ಕಬ್ಬು, ಹಣ್ಣಗಳನ್ನು ಸೇವಿಸಿದರು.
ಹಬ್ಬಕ್ಕಾಗಿ ನಗರದ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿ, ಎಳ್ಳು, ಕುಸುರೆಳ್ಳು, ಬೆಲ್ಲ, ಸಿಹಿ ತಿನಿಸು, ಕ್ಯಾರೆಹಣ್ಣು, ಬಾರೆ ಹಣ್ಣು, ಪೇರಲ, ಬಟಾಣಿ, ಕಡಲೆಕಾಯಿ, ತೊಗರಿಕಾಯಿ, ಕಬ್ಬು ಮೊದಲಾದವುಗಳ ಖರೀದಿ ಜೋರಾಗಿತ್ತು.
ನಗರದ ಡಿಸಿಸಿ ಬ್ಯಾಂಕ್ ಮುಂಭಾಗ, ಮಹಾವೀರ ವೃತ್ತ, ಜನವಾಡ ರಸ್ತೆ, ರಾಣಿ ಕಿತ್ತೂರು ಚನ್ನಮ್ಮ ವೃತ್ತ (ಮೈಲೂರ ಕ್ರಾಸ್), ಸಿದ್ಧಾರೂಢ ಮಠದ ಸಮೀಪ ಹಬ್ಬದ ಪ್ರಯುಕ್ತ ಬಾರೆಕಾಯಿ, ಪೇರಲ, ಕಡಲೆಕಾಯಿ, ತೊಗರಿಕಾಯಿ, ಬಟಾಣಿ, ಕಬ್ಬು ಮಾರಾಟ ಭರ್ಜರಿಯಾಗಿ ನಡೆಯಿತು. ಬೆಲ್ಲ ಬಳಸಿ ತಯಾರಿಸಿದ ಉಂಡಿಗಳಿಗೂ ಬೇಡಿಕೆ ಕಂಡು ಬಂದಿತು.