ಔರಾದ್: ಬಿತ್ತನೆ ಬೀಜ ಪೂರೈಕೆಯಲ್ಲಿ ನಿರ್ಲಕ್ಷ್ಯ ತೋರಿದ ಕೃಷಿ ಅಧಿಕಾರಿಗಳ ವಿರುದ್ಧ ರೈತರು ಗುರುವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ಕೃಷಿ ಇಲಾಖೆಯವರು ಈಗಾಗಲೇ ಕೆಲ ರೈತರಿಗೆ ಬೀಜ ವಿತರಿಸಿದ್ದಾರೆ. ಬೀಜದಲ್ಲಿ ದೋಷ ಇದೆ ಎಂದು ಉಳಿದ ರೈತರಿಗೆ ಬೀಜ ವಿತರಿಸುತ್ತಿಲ್ಲ. ಈ ರೀತಿ ರೈತರಲ್ಲಿ ಗೊಂದಲ ಮೂಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಸುಧಾಕರ ಕೊಳ್ಳೂರ್ ದೂರಿದರು.
ತಾಲ್ಲೂಕಿನ ರೈತರು ಕಳೆದ ಎರಡು ವಾರದಿಂದ ಬೀಜಕ್ಕಾಗಿ ಅಲೆಯುತ್ತಿದ್ದಾರೆ. ಆದರೆ, ಕೃಷಿ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ. ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಇಂತಹ ಅಧಿಕಾರಿಗಳನ್ನು ಇಲ್ಲಿಂದ ತೆಗೆಯಬೇಕು ಎಂದು ಆಗ್ರಹಿಸಿದರು.
ಸಚಿವ ಪ್ರಭು ಚವಾಣ್ ಅವರ ತವರು ಕ್ಷೇತ್ರದಲ್ಲೇ ರೈತರು ಬಿತ್ತನೆ ಬೀಜಕ್ಕಾಗಿ ಪರದಾಡುತ್ತಿದ್ದಾರೆ. ಆದರೆ, ಅವರು ಮಾತ್ರ ಈ ವಿಷಯದಲ್ಲಿ ಮೌನ ವಹಿಸುತ್ತಿದ್ದಾರೆ. ಇಲಾಖೆ ತಪ್ಪಿನಿಂದ ರೈತರು ಸಂಕಷ್ಟ ಎದುರಿಸಬೇಕಾಗಿದೆ ಎಂದು ದೂರಿದರು.
ಸ್ಥಳಕ್ಕೆ ಬಂದ ತಹಶೀಲ್ದಾರ್ ಎಂ. ಚಂದ್ರಶೇಖರ ರೈತರನ್ನು ಸಮಾಧಾನ ಮಾಡಿದರು. ತಾನಾಜಿ ತೊರಣೆಕರ್, ಶ್ರಾವಣ ಕೊಳೆಕರ್, ಅಶೋಕ ದರಬಾರೆ, ಹರಿದೇವ ಸಂಗನಾಳ, ಸಚಿನ್, ರಮೇಶ ಶೇಳಕೆ ಇದ್ದರು.