`ಶೀಲ ಶೀಲವೆಂದು ಗರ್ವಿಸಿ ನುಡಿವುತಿಪ್ಪರು, ಶೀಲವಾವುದೆಂದರಿಯರು. ಇದ್ದುದ ವಂಚನೆಯಹ ಮಾಡಿರಿರ್ಪುದೇ ಶೀಲ. ಇಲ್ಲದುದಕ್ಕೆ ಕಡನ ಬೇಡದಿರ್ಪುದೇ ಶೀಲ, ಪರಧನ, ಪರಸತಿಗೆಳಸದಿಪ್ಪುದೆ ಶೀಲ, ಪರದೈವ ಪರಸಮಯಕ್ಕೆಳಸದಿಪ್ಪುದೆ ಶೀಲ, ಗುರುನಿಂದೆ, ಜಂಗಮನಿಂದೆಯ ಕೇಳದಿಪ್ಪುದೆ ಶೀಲ, ಕೂಡಲಚೆನ್ನಸಂಗನ ಶರಣರ ಬರವಿಂಗೆ ಮುಯ್ಯಾಂತು ಪರಿಣಾಮಿಸಬಲ್ಲರೆ ಅಚ್ಚಶೀಲ’ ಎಂದು ಚನ್ನಬಸವಣ್ಣನವರು ಹೇಳುತ್ತಾರೆ. ಪರದೈವ, ಪರಧನ, ಪರಸತಿಯನ್ನು ಬಯಸದಿರುವವರೇ ಶೀಲವಂತರು. ಗುರುನಿಂದೆ, ಜಂಗಮನಿಂದೆ ಕೇಳಲಾರದವರೆ ಶೀಲವಂತರು. ಆಸೆರೋಷಗಳೆಲ್ಲವು ಬಿಟ್ಟು ದೇವನ ನೆನಹು ತುಂಬಿಕೊಂಡು ಸದಾಚಾರ ನಡೆಯನು ಅಳವಡಿಸಿಕೊಂಡವನೆ ಶೀಲವುಳ್ಳವರು.