ಬೀದರ್: ಪ್ರಸಕ್ತ ಸಾಲಿನ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 96 ರಷ್ಟು ಅಂಕ ಪಡೆದು ಸಾಧನೆಗೈದ ನಗರದ ಜ್ಞಾನಸುಧಾ ವಿದ್ಯಾಲಯದ ವಿದ್ಯಾರ್ಥಿ ಭಾಲ್ಕಿ ತಾಲ್ಲೂಕಿನ ತೇಗಂಪುರದ ಶ್ರೀರಂಗ ಗುಣವಂತರಾವ್ ಸಿಂದೆ ಅವರನ್ನು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಶಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಶನಿವಾರ ಸನ್ಮಾನಿಸಲಾಯಿತು.
ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನೌಬಾದ್ನ ವಿದ್ಯಾರ್ಥಿಯ ಮನೆಗೆ ತೆರಳಿ ಶಾಲು ಹೊದಿಸಿ ಸನ್ಮಾನಿಸಿದರು.
ಸಿಬಿಎಸ್ಇ 10ನೇ ತರಗತಿಯಲ್ಲಿ ಸಾಧನೆಗೈದಿರುವ ಶ್ರೀರಂಗ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪುರ ತಿಳಿಸಿದರು.
ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ, ಮೊಗಲಪ್ಪ ನಂದ್ಯಾಳ, ಗುಣವಂತರಾವ್ ಸಿಂದೆ, ಪ್ರಶಾಂತ ಬಿರಾದಾರ, ಬಜರಂಗ ಸಿಂದೆ ಇದ್ದರು.