ಬೀದರ್: ಜಿಲ್ಲೆಯಲ್ಲಿ ಹೆಸರು, ಉದ್ದು ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ)ಯ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಜಿಲ್ಲೆಯಲ್ಲಿ ಈ ವರ್ಷ 2 ಲಕ್ಷ ಕ್ವಿಂಟಲ್ ಹೆಸರು ಹಾಗೂ 1 ಲಕ್ಷ ಕ್ವಿಂಟಲ್ ಉದ್ದು ಉತ್ಪಾದನೆ ನಿರೀಕ್ಷೆ ಇದೆ. ಬೆಲೆ ಕುಸಿತದ ಸಾಧ್ಯತೆ ಇದೆ. ಕೊರೊನಾ ಸೋಂಕು ಕೃಷಿ ಮೇಲೂ ಬಹಳಷ್ಟು ಪರಿಣಾಮ ಬೀರಿದೆ. ಹೀಗಾಗಿ ಹೆಸರು ಹಾಗೂ ಉದ್ದನ್ನು ಪಿಕೆಪಿಎಸ್ ಮೂಲಕ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಸವಕಲ್ಯಾಣ ತಾಲ್ಲೂಕಿನ ಸೈದಾಪುರ ಹಾಗೂ ಯದಲಗುಂಡಿ ತಾಂಡಾದ ರೈತರು ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಶಾಂತಮ್ಮ ಹಜನಾಳ, ಪ್ರಮುಖರಾದ ಕಾಸಿಂ ಅಲಿ, ಮುಖಿಮೊದ್ದಿನ್, ವಿಠ್ಠಲರೆಡ್ಡಿ, ನಾಗೇಂದ್ರಪ್ಪ ತರನಳ್ಳಿ, ನಾಗಶೆಟ್ಟೆಪ್ಪ ಲಂಜವಾಡೆ ಇದ್ದರು.