ಬೀದರ್: ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ಜಾಗತಿಕ ನಿಧಿ ಬಳಕೆಗೆ ಜಿಲ್ಲೆಯಲ್ಲಿ ಜನೋಪಯೋಗಿ ಯೋಜನೆ ರೂಪಿಸಲಾಗುವುದು ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ನೂತನ ಅಧ್ಯಕ್ಷ ಡಾ.ನಿತೇಶಕುಮಾರ ಬಿರಾದಾರ ಹೇಳಿದರು.
ನಗರದ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಡೆದ 2021-22ನೇ ಸಾಲಿನ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ನೀರು ಮತ್ತು ನೈರ್ಮಲ್ಯ, ತಾಯಿ ಮತ್ತು ಮಕ್ಕಳ ಆರೋಗ್ಯ, ಆರ್ಥಿಕ ಮತ್ತು ಸಮುದಾಯ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಮೂಲ ಶಿಕ್ಷಣ ಮತ್ತು ಸಾಕ್ಷರತೆ, ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಹಾಗೂ ಶಾಂತಿ ಸ್ಥಾಪನೆ ಕಾರ್ಯಗಳಿಗೆ ಜಾಗತಿಕ ನಿಧಿ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಒಂದೂವರೆ ವರ್ಷದಿಂದ ಕಾಡುತ್ತಿರುವ ಕೊರೊನಾ ಆರ್ಥಿಕ, ಶೈಕ್ಷಣಿಕ, ಮಾನಸಿಕ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಬಹಳಷ್ಟು ವಿದ್ಯಾರ್ಥಿಗಳು ಖಿನ್ನತೆಯಿಂದ ಬಳಲುತ್ತಿದ್ದಾರೆ. ಮನೋರೋಗ ತಜ್ಞರ ನೆರವಿನೊಂದಿಗೆ ಅಂಥವರಿಗೆ ಪ್ರೇರಣಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಪಾಲಕತ್ವ ವಿಚಾರ ಸಂಕಿರಣ, ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಗಳಲ್ಲಿ ಇರುವ ಅವಕಾಶಗಳ ಬಗ್ಗೆ ಯುವಕರಿಗೆ ಮಾರ್ಗದರ್ಶನ ನೀಡಲು ಕಾರ್ಯಾಗಾರ ಏರ್ಪಡಿಸಲಾಗುವುದು. ಅಗತ್ಯ ಇರುವ ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ಬೆಂಚ್ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ರೋಟರಿ ಸಂಸ್ಥೆ ಜನ ಸೇವೆಗೆ ಹೆಸರಾಗಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿ ಇದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.
ಜಗತ್ತಿಗೆ ರೋಟರಿ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಮಾಜಿ ಗವರ್ನರ್ ಕೆ.ಸಿ. ಸೇನನ್ ನುಡಿದರು.
ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಶಿವಕುಮಾರ ಯಲಾಲ್, ಸಂಗೀತ ಕಲಾವಿದ ಕೃಷ್ಣ ಮುಖೇಡಕರ್, ಕ್ಲಬ್ ನಿಕಟಪೂರ್ವ ಅಧ್ಯಕ್ಷರಾದ ಡಾ. ಶ್ವೇತಾ ಮೇಗೂರ, ಸೂರ್ಯಕಾಂತ ರಾಮಶೆಟ್ಟಿ, ನಿಯೋಜಿತ ಅಧ್ಯಕ್ಷ ನಿತಿನ್ ಕರ್ಪೂರ, ಉಪಾಧ್ಯಕ್ಷ ಡಾ. ಕಪಿಲ್ ಪಾಟೀಲ, ಕಾರ್ಯದರ್ಶಿ ಸುಧೀಂದ್ರ ಸಿಂದೋಲ್, ಆಡಳಿತಾತ್ಮಕ ಕಾರ್ಯದರ್ಶಿ ಡಾ. ರಘು ಕೃಷ್ಣಮೂರ್ತಿ, ಖಜಾಂಚಿ ಕಾಮಶೆಟ್ಟಿ ಚಿಕ್ಕಬಸೆ, ಡಾ. ರಿತೇಶ ಸುಲೆಗಾಂವ, ಸತೀಶ ಸ್ವಾಮಿ, ರಾಜಕುಮಾರ ಅಳ್ಳೆ, ರೋಟ್ರ್ಯಾಕ್ಟ್ ಕ್ಲಬ್ ಆಫ್ ಬೀದರ್ ಲೆಗಾಸಿ ಅಧ್ಯಕ್ಷ ಭಾಗೇಶ ಬಿರಾದಾರ, ರೋಟ್ರ್ಯಾಕ್ಟ್ ಕ್ಲಬ್ ಆಫ್ ಬೀದರ್ ಹೆರಿಟೇಜ್ ಅಧ್ಯಕ್ಷ ರೋಹಿತ್ ಕಾಂಬಳೆ ಹಾಗೂ ಇಂಟ್ರಾಕ್ಟ್ಯ್ ಕ್ಲಬ್ ಆಫ್ ಸನ್ಶೈನ್ ಅಧ್ಯಕ್ಷ ವಾರದ ರಾಮಶೆಟ್ಟಿ ಇದ್ದರು.
ಡಾ. ಜಗದೀಶ್ ಪಾಟೀಲ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.