ಬೀದರ್: ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಮಾರ್ಗಗಳಲ್ಲಿ ಸ್ಥಾಪಿಸಲಾಗಿರುವ ಚೆಕ್ಪೋಸ್ಟ್ಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿಸಲಾಗಿದ್ದು, ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಔರಾದ್ ತಾಲ್ಲೂಕಿನ ವನಮಾರಪಳ್ಳಿ, ಕಮಲನಗರ, ಕಮಲನಗರ ತಾಲ್ಲೂಕಿನ ಚಿಕ್ಲಿ, ಹುಲಸೂರು ತಾಲ್ಲೂಕಿನ ಅಂಬೇವಾಡಿ ಹಾಗೂ ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ ಚೆಕ್ಪೋಸ್ಟ್ಗಳ ಮಾರ್ಗವಾಗಿ ಬರುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಕೋವಿಡ್ ನೆಗೆಟಿವ್ ವರದಿ ಪರಿಶೀಲಿಸಿದ ನಂತರವೇ ಅವಕಾಶ ಕಲ್ಪಿಸಲಾಯಿತು.
ತಪಾಸಣೆ ಬಿಗಿಗೊಳಿಸಿದ ಕಾರಣ ಜಿಲ್ಲೆಯೊಳಗೆ ಬರುವವರ ಸಂಖ್ಯೆ ಸ್ವಲ್ಪ ಕಡಿಮಾಗಿದೆ. ದ್ವಿಚಕ್ರ ವಾಹನದ ಮೇಲೆ ಮಾಸ್ಕ್ ಧರಿಸದೆ ಬಂದವರಿಗೆ ಪೊಲೀಸರು ಎಚ್ಚರಿಕೆ ನೀಡಿ ಬಿಸಿ ಮುಟ್ಟಿಸಿದರು.
ಬಂದ್ ಇದ್ದರೂ ಅನಗತ್ಯ ತಿರುಗಾಟ: ಜಿಲ್ಲೆಯಲ್ಲಿ ಕರ್ಫ್ಯೂ ಜಾರಿ ಇರುವ ಕಾರಣ ಭಾನುವಾರ ಮಧ್ಯಾಹ್ನ 2 ಗಂಟೆಗೆ ಎಲ್ಲ ಅಂಗಡಿಗಳು ಮುಚ್ಚಿದ್ದವು. ಆದರೆ, ಸಾರ್ವಜನಿಕರ ಓಡಾಟ ನಿಂತಿರಲಿಲ್ಲ. ದ್ವಿಚಕ್ರ ವಾಹನಗಳ ಮೇಲೆ ಸಂಚರಿಸುವುದು ಮುಂದುವರಿದಿತ್ತು. ಬೆಳಿಗ್ಗೆ ಮಾರುಕಟ್ಟೆಯಲ್ಲಿ ಬಹುತೇಕ ಜನ ಮಾಸ್ಕ್ ಧರಿಸದೆ ಅಲೆದಾಡುತ್ತಿದ್ದರು. ಅಂತರ ಸಹ ಕಾಯ್ದುಕೊಂಡಿರಲಿಲ್ಲ.