ಬಸವಕಲ್ಯಾಣ: ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ, ಬೀದರ್ ಸಂಸದ ಭಗವಂತ ಖೂಬಾ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರ ಬೆಂಬಲಿಗರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಶನಿವಾರ ಸಂಜೆ ಮಾತಿನ ಚಕಮಕಿ ನಡೆಯಿತು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಭಗವಂತ ಖೂಬಾ ನೇತೃತ್ವದಲ್ಲಿ ತಿರಂಗ ಯಾತ್ರೆ ಸಂಗಮ, ಬೀದರ್, ಹುಮನಾಬಾದ್ ಮಾರ್ಗವಾಗಿ ಇಲ್ಲಿಗೆ ಬಂದಾಗ ಬಸವೇಶ್ವರ ವೃತ್ತದಲ್ಲಿ ಭಗವಂತ ಖೂಬಾ ಮತ್ತು ಶರಣು ಸಲಗರ ಬೆಂಬಲಿಗರ ನಡುವೆ ತಳ್ಳಾಟ ಆಗಿದೆ.‘ಶರಣು ಸಲಗರ ಅವರನ್ನು ಕಡೆಗಣಿಸಲಾಗುತ್ತಿದೆ’ ಎಂದು ಕೆಲ ಕಾರ್ಯಕರ್ತರು ಖೂಬಾ ಅವರ ವಿರುದ್ಧ ಘೋಷಣೆ ಕೂಗಿದರು. ಅವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಪರ–ವಿರೋಧ ಆಕ್ರೋಶ ವ್ಯಕ್ತವಾಯಿತು. ಕೆಲವರು ಸಚಿವರ ಕಾರಿನ ಹಿಂಬದಿಗೆ ಧ್ವಜದ ಕೋಲಿನಿಂದ ಹೊಡೆದು,‘ನೇಮ್ ಪ್ಲೇಟ್’ಗೆ ಹಾನಿಗೊಳಿಸಿದರು. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಇದರ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಇಲ್ಲಿನ ಬಿಕೆಡಿಬಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು ನೇತೃತ್ವದಲ್ಲಿ ಶಾಂತಿ ಸಂಧಾನ ನಡೆಸುವ ಯತ್ನ ನಡೆಯಿತು. ಪರಿಸ್ಥಿತಿ ತಿಳಿಗೊಂಡಿದೆ. ಆದರೆ, ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಲು ಭಗವಂತ ಖೂಬಾ ನಿರಾಕರಿಸಿದರು. ಡಿ.ಕಿಶೋರ್ ಬಾಬು ಮತ್ತು ಶರಣು ಸಲಗರ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.