ಬೀದರ್: ರೈತರು ಮುಂಗಾರು ಹಂಗಾಮಿನಲ್ಲಿ ಪ್ರಮಾಣಿಕೃತ ಸೋಯಾಬೀನ್ ಬೀಜಗಳನ್ನೇ ಬಿತ್ತನೆಗೆ ಬಳಸಬೇಕು ಎಂದು ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ ತಿಳಿಸಿದ್ದಾರೆ.
ಜಿಲ್ಲೆಯ ಕೃಷಿ ವಲಯಕ್ಕೆ ಶಿಫಾರಸು ಮಾಡಲಾದ ಸೋಯಾಬೀನ್ ತಳಿಗಳಾದ ಜೆ.ಎಸ್. 335 ಹಾಗೂ ಡಿ.ಎಸ್.ಬಿ 21 ಬೆಳೆಯುವುದು ಸೂಕ್ತ. ರೈತರು ಕಳೆದ ವರ್ಷ ತಾವು ಬೆಳೆದ ಬೀಜಗಳ ಮೊಳಕೆ ಪ್ರಮಾಣ ಪರೀಕ್ಷಿಸಿ, ಶೇ 70 ರಷ್ಟು ಮೊಳಕೆಗಳಿದ್ದಲ್ಲಿ ಬಿತ್ತನೆ ಮಾಡಬಹುದು ಎಂದು ಹೇಳಿದ್ದಾರೆ.
70 ಮಿ.ಮೀ. ಗಿಂತ ಹೆಚ್ಚು ಮಳೆಯಾದರೆ ಮಾತ್ರ ತೊಗರಿ, ಹೆಸರು, ಉದ್ದು ಬಿತ್ತನೆ ಮಾಡುವುದು ಒಳ್ಳೆಯದು. 80 ರಿಂದ 100 ಮಿ.ಮೀ. ಮಳೆಯಾದಲ್ಲಿ ಸೋಯಾಬೀನ್ ಬಿತ್ತಬಹುದು ಎಂದು ತಿಳಿಸಿದ್ದಾರೆ.
ಸದ್ಯ ಸುರಿದ ಮಳೆಯ ಪ್ರಮಾಣ ಬಿತ್ತನೆಗೆ ಸೂಕ್ತವಾಗಿರದ ಕಾರಣ ಸಾಕಷ್ಟು ಮಳೆಯಾದ ನಂತರವೇ ಬಿತ್ತನೆ ಕೈಗೊಳ್ಳಬೇಕು. ಸದ್ಯ ಬಿತ್ತನೆ ಕೈಗೊಂಡಲ್ಲಿ ಮೊಳಕೆ ಒಡೆಯದೆ ಬೀಜ ಮಣ್ಣಿನಲ್ಲಿಯೇ ಕೊಳೆಯುವ ಸಂಭವ ಇರುತ್ತದೆ ಎಂದು ಹೇಳಿದ್ದಾರೆ.
ರೈತರು ತಮ್ಮ ಹೋಬಳಿಯಲ್ಲಿ ಅಗತ್ಯ ಮಳೆ ಸುರಿದಿದ್ದಲ್ಲಿ ಮಾತ್ರ ಬಿತ್ತನೆ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.