ಬೀದರ್: ಇಲ್ಲಿಯ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಕಾರ್ಮೆಲ್ ಸೇವಾ ಟ್ರಸ್ಟ್ ವತಿಯಿಂದ ಪುರುಷ ಕೈದಿಗಳಿಗೆ ವೃತ್ತಿ ಪರ ತರಬೇತಿ ಕಾರ್ಯಾಗಾರ ನಡೆಯಿತು.
ತರಬೇತಿಯನ್ನು ಕಾರ್ಮೆಲ್ ಸೇವಾ ಟ್ರಸ್ಟ್ ಸಂಯೋಜಕಿ ಸಿಸ್ಟರ್ ಕ್ರಿಸ್ಟಿನ್ ನಿಸ್ಕಿತ್ ಉದ್ಘಾಟಿಸಿ ಮಾತನಾಡಿ,‘ಕೈದಿಗಳು ತಿಳಿದು ತಿಳಯದೇ ತಪ್ಪು ಮಾಡಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಶಿಕ್ಷೆ ಮುಗಿದ ನಂತರ ಬಿಡುಗಡೆಯಾಗಿ ಮುಂದೆ ಉತ್ತಮ ಜೀವನ ನಡೆಸಬೇಕು’ ಎಂದು ಮನವಿ ಮಾಡಿದರು.
ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಎಲ್ಲರೂ ಒಳ್ಳೆಯವರಾಗಿ ಬಾಳಬೇಕು. ಜೈಲಿನಿಂದ ಹೊರಗಡೆ ಬಂದ ನಂತರ ಉದ್ಯೋಗಸ್ಥರಾಗಬೇಕು. ಅದಕ್ಕಾಗಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರಾಗೃಹದ ಮುಖ್ಯ ಅಧೀಕ್ಷಕ ದತ್ತಾತ್ರೇಯ ಮೇಧಾ ಮಾತನಾಡಿ,‘ಕಾರಾಗೃಹದ ಕೈದಿಗಳಿಗೆ ವೃತ್ತಿಪರ ಕೌಶಲ ತರಬೇತಿ ನೀಡಬೇಕು ಎಂದು ಸರ್ಕಾರದ ಆದೇಶವಿದೆ. ಕೈದಿಗಳನ್ನು ಉತ್ತಮ ಮನುಷ್ಯರನ್ನಾಗಿ ಮಾಡುವುದೇ ನಮ್ಮ ಉದ್ದೇಶವಾಗಿದೆ’ ಎಂದರು.
ಟಿ.ಎಸ್.ಭಜಂತ್ರಿ ಮಾತನಾಡಿದರು.
ಡಾನ್ ಬಾಸ್ಕೊ ವೃತ್ತಿಪರ ಕೌಶಲ ತರಬೇತಿ ಕಾಲೇಜಿನ ಪ್ರಾಚಾರ್ಯ ಫಾದರ್ ಮ್ಯಾಥ್ಯೂಸ್, ಕಾರ್ಮೆಲ್ ಸೇವಾ ಸಂಸ್ಥೆಯ ಸಿಸ್ಟರ್ ರೀಟಾ ಹಾಗೂ ಸಿಸ್ಟರ್ ಪ್ರಿಯಾ ಹಾಜರಿದ್ದರು.