ಬೀದರ್: ‘ಜಗತ್ತಿನ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಅರ್ಥವ್ಯವಸ್ಥೆ ಸದೃಢವಾಗಿದೆ’ ಎಂದು ಬೀದರ್ ವಿಶ್ವವಿದ್ಯಾಲಯದ ಸಾಮಾಜಿಕ ನಿಕಾಯದ ಡೀನ್ ದೇವಿದಾಸ ತುಮಕುಂಟೆ ಅಭಿಪ್ರಾಯ ಪಟ್ಟರು.
ನಗರದ ಸಿದ್ದಾರ್ಥ ಪದವಿ ಕಾಲೇಜಿನಲ್ಲಿ ಗುರುವಾರ ಅರ್ಥಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ ‘ಹೊಸ ಆರ್ಥಿಕ ನೀತಿ’ ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
90ರ ದಶಕದಿಂದ ಭಾರತ ಮುಕ್ತ ಮಾರುಕಟ್ಟೆಯತ್ತ ಹೆಜ್ಜೆ ಇಟ್ಟಿದೆ. ಜಗತ್ತಿನ ವಿವಿಧ ರಾಷ್ಟ್ರಗಳ ಕಂಪನಿಗಳು ಬಂಡವಾಳ ಹೂಡಿಕೆ ಮಾಡುತ್ತಿವೆ. ಇದರಿಂದ ಅನೇಕ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ತಲಾ ಆದಾಯ ಹಾಗೂ ರಾಷ್ಟ್ರೀಯ ಆದಾಯ ಉತ್ತಮಗೊಳ್ಳುತ್ತಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸುಚ್ಚಿದಾನಂದ ಕೆ. ಮಲ್ಕಾಪೂರೆ ಮಾತನಾಡಿ, ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದಿಂದ ಉತ್ತಮ ಫಲಿತಾಂಶ ಬರುತ್ತಿದೆ ಎಂದು ಹೇಳಿದರು.
ಸಿದ್ಧಾರ್ಥ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಗೋಪಾಲ ಬಡಿಗೇರ್, ಪ್ರೊ. ಎ. ಬಿ. ಅಶೋಕ, ಪ್ರೊ ಜಗನ್ನಾಥ ಬಡಿಗೇರ್, ಪ್ರೊ. ಬಸವರಾಜ ಸ್ವಾಮಿ, ಪ್ರೊ. ಗಿರೀಶ ಎಂ. ಮೀಸಿ ಹಾಜರಿದ್ದರು.