ಬೀದರ್: ₹ 500 ಹಾಗೂ ₹ 1,000 ಮುಖಬೆಲೆಯ ಹಳೆಯ ನೋಟುಗಳು ಅಪಮೌಲ್ಯಗೊಂಡು ಇಂದಿಗೆ ಒಂದು ವರ್ಷ ಕಳೆದಿದೆ. ಮಾರುಕಟ್ಟೆಯಲ್ಲಿ ನಿರೀಕ್ಷೆಗೂ ಮೀರಿ ಬದಲಾವಣೆ ಆಗಲಿದೆ ಎನ್ನುವ ಕೇಂದ್ರ ಸರ್ಕಾರದ ಲೆಕ್ಕಾಚಾರ ಬುಡಮೇಲಾಗಿದೆ. ವರ್ಷದ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಎಳ್ಳಷ್ಟು ಪ್ರಗತಿ ಕಂಡು ಬಂದಿಲ್ಲ. ಜಿಲ್ಲೆಯಲ್ಲಿ ಅರ್ಥ ವ್ಯವಸ್ಥೆ ಕುಸಿದಿದ್ದು, ಚೇತರಿಕೆ ಲಕ್ಷಣಗಳೂ ಗೋಚರಿಸುತ್ತಿಲ್ಲ.
ಸಣ್ಣ, ಮಧ್ಯಮ ಕೈಗಾರಿಕೆಗಳು , ಆಹಾರ ಧಾನ್ಯ ಸಗಟು ವ್ಯಾಪಾರಿಗಳು, ಬಟ್ಟೆ, ಚಿನ್ನಾಭರಣ ವ್ಯಾಪಾರಿಗಳು ಹಾಗೂ ಕೃಷಿ ಉತ್ಪನ್ನ ಸಂಸ್ಥೆಗಳು ಹೆಚ್ಚು ತೊಂದರೆಗೆ ಒಳಗಾಗಿವೆ. ಆಹಾರ ಧಾನ್ಯ, ಬೇಳೆ ಕಾಳುಗಳ ಬೆಲೆ ಕುಸಿದ ಕಾರಣ ರೈತರಿಗೂ ನಿರೀಕ್ಷಿತ ಲಾಭ ದೊರೆತಿಲ್ಲ. ಸರ್ಕಾರದ ಉಗ್ರಾಣಗಳಲ್ಲೂ ಬೇಳೆ ಕಾಳುಗಳ ದಾಸ್ತಾನು ಕಡಿಮೆ ಇದೆ. ನಷ್ಟ ಅನುಭವಿಸಿರುವ ವ್ಯಾಪಾರಿಗಳು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಮಾರುಕಟ್ಟೆಯಲ್ಲಿ ಹೆಸರು ಹಾಗೂ ಉದ್ದು ಕ್ವಿಂಟಲ್ಗೆ ₹ 3,500 ರಿಂದ 4 ಸಾವಿರಕ್ಕೆ ಮಾರಾಟವಾಗುತ್ತಿದೆ. ಕೇಂದ್ರ ಸರ್ಕಾರ ಹೆಸರು ಕಾಳಿಗೆ ಕ್ವಿಂಟಲ್ಗೆ ₹ 5,500 ಹಾಗೂ ಉದ್ದಿಗೆ ₹ 2,250 ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ. ಸೋಯಾ ಬೆಲೆ ₹3 ಸಾವಿರ ಇರಬೇಕಿತ್ತು. ₹ 2 ಸಾವಿರಕ್ಕೆ ಮಾರಾಟವಾಗುತ್ತಿದೆ. ಬೆಂಬಲ ಬೆಲೆಗಿಂತಲೂ ಕಡಿಮೆ ದರದಲ್ಲಿ ಕೃಷಿ ಉತ್ಪನ್ನಗಳು ಮಾರಾಟ ಆಗುತ್ತಿರುವ ಕಾರಣ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ ಎಂದು ವ್ಯಾಪಾರಿಗಳು ಗೋಳು ತೋಡಿಕೊಳ್ಳುತ್ತಿದ್ದಾರೆ.
ಉದ್ಯೋಗ ಕಳೆದುಕೊಂಡರು: ಅಧಿಕ ಮುಖಬೆಲೆಯ ನೋಟಗಳು ರದ್ದಾದ ನಂತರ ವ್ಯಾಪಾರಿಗಳು ಆಹಾರ ಧಾನ್ಯ ದಾಸ್ತಾನು ಮಾಡುವುದನ್ನು ಶೇಕಡ 25ರಿಂದ 40ರಷ್ಟು ಕಡಿತಗೊಳಿಸಿದರು. ಅದಕ್ಕೆ ಅನುಗುಣವಾಗಿ ಕೆಲಸಗಾರರನ್ನು ಬಿಡಿಸಿದರು. ಹೀಗಾಗಿ ಅನೇಕ ಜನ ಉದ್ಯೋಗ ಕಳೆದುಕೊಂಡಿದ್ದಾರೆ.
‘ಬೀದರ್ನಲ್ಲಿ 20 ದಾಲ್ಮಿಲ್ಗಳಿವೆ. ಆದರೆ ಎರಡು ದಾಲ್ಮಿಲ್ಗಳು ಮಾತ್ರ ವಹಿವಾಟು ನಡೆಸಿವೆ. ಅವಿಭಕ್ತ ಕುಟುಂಬದವರು ಹಾಗೂ ಸಿರಿವಂತರು ಬೆಲೆ ಕಡಿಮೆ ಇದ್ದಾಗ ಕ್ವಿಂಟಲ್ ಗಟ್ಟಲೆ ಕಾಳುಗಳನ್ನು ಖರೀದಿಸಿ ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಈಗ ಅಂಥವರೂ ಕೇವಲ 10, 20 ಕೆಜಿ ಖರೀದಿಸುತ್ತಿದ್ದಾರೆ’ ಎಂದು ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ನೂತನ ಅಧ್ಯಕ್ಷ ಬಸವರಾಜ ಧನ್ನೂರ ಹೇಳುತ್ತಾರೆ.
‘ಮೊದಲು ವ್ಯಾಪಾರಿಗಳು ಉಗ್ರಾಣದಲ್ಲಿ ಬೇಳೆಕಾಳುಗಳನ್ನು ಸಂಗ್ರಹಿಸಿ ಇಡುತ್ತಿದ್ದರು. ಈಗ ಸರ್ಕಾರವೇ ಬೇಳೆ ಕಾಳು ಸಂಗ್ರಹಿಸಿ ಇಡುತ್ತಿದೆ. ದೇಶದಲ್ಲಿ ಕಪ್ಪು ಹಣ ಇದೆ ಎನ್ನುವುದು ಹುಸಿಯಾಗಿದೆ. ಶೇಕಡ 99ರಷ್ಟು ಹಳೆಯ ನೋಟುಗಳು ಬ್ಯಾಂಕಿಗೆ ಜಮಾ ಆಗಿವೆ ಎಂದು ಆರ್ಬಿಐ ವರದಿ ಕೊಟ್ಟಿದೆ. ಕೇಂದ್ರ ಸರ್ಕಾರದ ಲೆಕ್ಕಾಚಾರ ದಾರಿ ತಪ್ಪಿದ ಕಾರಣ ಉನ್ನತ ಹಂತದಲ್ಲಿದ್ದ ವಹಿವಾಟು ಕುಸಿದು ಬಿದ್ದಿದೆ. ಅರ್ಥ ವ್ಯವಸ್ಥೆ 10 ವರ್ಷ ಹಿಂದಕ್ಕೆ ಹೋಗಿದೆ’ ಎಂದು ವಿವರಿಸುತ್ತಾರೆ.
‘ಏನು ಮಾಡಿದರೂ ಪ್ರಗತಿ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಷ್ಟೇ ಹಣ ಹೂಡಿಕೆ ಮಾಡಿದರೂ ಹಾನಿಯೇ ಆಗುತ್ತಿದೆ ಹೊರತು ಲಾಭ ಆಗುತ್ತಿಲ್ಲ. ವ್ಯಾಪಾರಿ ವರ್ಗದಲ್ಲಿ ತೀವ್ರ ಅಸಮಾಧಾನ ಇದೆ’ ಎಂದು ಹೇಳುತ್ತಾರೆ.
50 ಎಕರೆ ಜಮೀನು ಇರುವ ರೈತ ಇದ್ದರೂ ಬೇಳೆಕಾಳು ಖರೀದಿ ಕೇಂದ್ರಗಳಲ್ಲಿ 10 ಚೀಲ ಬೇಳೆಕಾಳು ಮಾತ್ರ ತೆಗೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಅನ್ಯ ರೈತರ ಹೆಸರಲ್ಲಿ ಧಾನ್ಯ ಸಂಗ್ರಹಿಸುತ್ತಿದ್ದಾರೆ. ಹೆಚ್ಚು ಜಮೀನು ಹೊಂದಿರುವ ರೈತರಿಂದ ಹಣ ವಸೂಲಿ ಮಾಡಿ ಧಾನ್ಯ ಸಂಗ್ರಹಿಸಿ ಇಟ್ಟಿರುವ ದೂರುಗಳು ಕೇಳಿ ಬರುತ್ತಿವೆ. ‘ಕೆಲವರು ಮಾರುಕಟ್ಟೆಯಲ್ಲಿ ಆಹಾರಧಾನ್ಯ ಖರೀದಿಸಿ ಖರೀದಿ ಕೇಂದ್ರಕ್ಕೆ ಕೊಡುತ್ತಿರುವುದನ್ನು ತಳ್ಳಿಹಾಕುವಂತಿಲ್ಲ. ರೈತರು ಹೆಚ್ಚು ತೊಂದರೆ ಅನುಭವಿಸಿದ್ದಾರೆ’ ಎಂದು ಹೇಳುತ್ತಾರೆ.
‘ಆರಂಭಿಕ ಹಂತದಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆ ಎದುರಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಿಂತಿದೆ. ಬೇರೆಯವರ ಹೆಸರಲ್ಲಿ ನಡೆಸುವ ವ್ಯವಹಾರಕ್ಕೆ ಕಡಿವಾಣ ಬಿದ್ದಿದೆ. ಜನಸಾಮಾನ್ಯರಿಗೆ ಹಾಗೂ ನೌಕರ ವರ್ಗಕ್ಕೆ ಯಾವುದೇ ತೊಂದರೆ ಆಗಿಲ್ಲ. ಆದರೆ ಭ್ರಷ್ಟಾಚಾರವೂ ಕಡಿಮೆ ಆಗಿಲ್ಲ’ ಎನ್ನುತ್ತಾರೆ ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ.
‘ರೈತರಿಗೆ ಇಂದಿಗೂ ನೇರ ವ್ಯವಹಾರ ಮಾಡಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಮೂಲಕವೇ ವ್ಯವಹರಿಸಬೇಕು ಎನ್ನುವುದು ಹಳ್ಳಿಯಲ್ಲಿರುವ ರೈತರಿಗೆ ತೊಡಕಾಗಿದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ ಕೌಠಾ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.