ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಊಟಿ ರಸ್ತೆಯಲ್ಲಿ ಹುಲಿಯೊಂದು ಮರಿಯಾನೆ ಮೇಲೆ ದಾಳಿ ಮಾಡಿದ್ದು, ಮರಿ ಮೃತಪಟ್ಟಿದೆ.
ಮೂರು ದಿನಗಳ ಹಿಂದೆಯೇ ಹುಲಿ ದಾಳಿ ಮಾಡಿದ್ದು, ಅಸ್ವಸ್ಥಗೊಂಡಿದ್ದ ಮರಿಯಾನೆ ಶನಿವಾರ ಹೆದ್ದಾರಿ ಬದಿ ಬಿದ್ದು ಮೃತಪಟ್ಟಿದೆ. ಆನೆಗೆ ನಾಲ್ಕು ತಿಂಗಳು ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಬಂಡೀಪುರದಿಂದ ಕೆಕ್ಕನಹಳ್ಳ ಚೆಕ್ ಪೋಸ್ಟ್ ಕಡೆಗೆ ಮೂರು ಕಿ.ಮೀ ದೂರದಲ್ಲಿ ಮರಿಯಾನೆ ಮೃತಪಟ್ಟಿದೆ.
ತಾಯಾನೆಯು ಮರಿಯ ಕಳೇಬರದ ಬಳಿ ನಿಂತು ರೋದಿಸುತ್ತಿದ್ದುದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕಿ.ಮೀ ಗಟ್ಟಲೆ ವಾಹನಗಳು ಸಾಲು ನಿಂತಿದ್ದವು.
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮರಿಯಾನೆ ಮೃತದೇಹವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರು