ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರೆಗಾಂವ್ ವಿಜಯೋತ್ಸವ: ವಿಜಯಸ್ತಂಭ ಮೆರವಣಿಗೆ

ದಲಿತರ ಆತ್ಮಗೌರವ ಹಾಗೂ ಹಕ್ಕುಗಳಿಗೆ ನಡೆದ ಯುದ್ಧ–ಸಿದ್ದರಾಜಪ್ಪ ಬಣ್ಣನೆ
Last Updated 1 ಜನವರಿ 2022, 17:27 IST
ಅಕ್ಷರ ಗಾತ್ರ

ಚಾಮರಾಜನಗರ: 204ನೇ ಭೀಮ ಕೋರೆಗಾಂವ್‌ ವಿಜಯೋತ್ಸವದ ಅಂಗವಾಗಿ ನಗರದಲ್ಲಿ ಶನಿವಾರ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಶಾಖೆಯ ವತಿಯಿಂದ ಕೋರೆಗಾಂವ್‌ ವಿಜಯಸ್ತಂಭದ ಪ್ರತಿಕೃತಿಯ ಮೆರವಣಿಗೆ ನಡೆಯಿತು.

ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮೆರವಣಿಗೆಗೆ ಕಾಂಗ್ರೆಸ್‌ ಮುಖಂಡ ಎಸ್.ನಂಜುಂಡಸ್ವಾಮಿ ಅವರು ಚಾಲನೆ ನೀಡಿದರು.

ಮೆರವಣಿಗೆಯು ಸತ್ಯಮಂಗಲ ರಸ್ತೆ, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಚಾಮರಾಜೇಶ್ವರ ಉದ್ಯಾನವನ ರಸ್ತೆ, ನಗರಸಭಾ ಕಚೇರಿ ಮೂಲಕ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತದ ಮೂಲಕ ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮೆರವಣಿಗೆಯು ಕೆಸಿಆರ್ ವಿದ್ಯಾರ್ಥಿನಿಲಯದ ಬಳಿಗೆ ತೆರಳಿ ಮುಕ್ತಾಯ ಕಂಡಿತು.

ಕೆ.ಸಿ.ಆರ್‌ ವಿದ್ಯಾರ್ಥಿ ನಿಲಯದ ಆವರಣದಲ್ಲಿ ವೇದಿಕೆ ಸಮಾರಂಭವೂ ನಡೆಯಿತು.

ಭೀಮ ಕೋರೆಗಾಂವ್ ವಿಜಯದ ಇತಿಹಾಸ ಮತ್ತು ಮಹತ್ವ ಕುರಿತು ಮಾತನಾಡಿದ ಭಾರತೀಯ ಬೌದ್ಧ ಮಹಾಸಭಾ ಸಂಸ್ಕಾರ ವಿಭಾಗದ ಕಾರ್ಯದರ್ಶಿ ಸಿದ್ದರಾಜಪ್ಪ ಅವರು, ‘ಕೋರೆಗಾಂವ್ ಕದನ ಭಾರತದ ಇತಿಹಾಸದಲ್ಲೇ ಮಹತ್ವದ ಸ್ಥಾನ ಪಡೆದಿದೆ.ದಲಿತರ ಆತ್ಮಗೌರವ ಹಾಗೂ ಹಕ್ಕುಗಳಿಗೆ ತಳಕು ಹಾಕಿಕೊಂಡ ಸ್ಥಳವಿದು. 500 ಮಂದಿ ಮಹಾರ್ ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿ ವಿಲ್ಲದೆ 28 ಸಾವಿರ ಮಂದಿಯ ಪೇಶ್ವೆಗಳ ಸೈನ್ಯದ ವಿರುದ್ಧ ನಿರಂತರ 12 ಗಂಟೆ ಕಾದಾಡಿದ ಸ್ಮರಣೀಯ ಕದನವಿದು. ಇದರಲ್ಲಿ ಮಹಾರ್‌ ಸೈನಿಕರು ಇತಿಹಾಸ ಸೃಷ್ಟಿಸಿದರು’ ಎಂದರು.

ಆ ಯುದ್ಧದಲ್ಲಿ ಪೇಶ್ವೆಗಳು ಬರೀ ಸೋತಿದ್ದಲ್ಲ. ಮಹಾರಾಷ್ಟ್ರದಲ್ಲಿ ಅವರ ಉತ್ತರಾದಾಯಿತ್ವವೇ ಅಂತ್ಯವಾಯಿತು. ಹಲವು ಕಾರಣಗಳಿಗಾಗಿ ಈ ಯುದ್ಧಕ್ಕೆ ಮಹತ್ವ ಇದೆ ಎಂದರು.

ಆತ್ಮಗೌರವ ಮತ್ತು ಹಕ್ಕಿಗಾಗಿ ಹೋರಾಟ: ‘ಮಹಾರ್‌ ಸೈನಿಕರ ಆತ್ಮಗೌರವ ಹಾಗೂ ಹಕ್ಕುಗಳಿಗಾಗಿ ಯುದ್ಧ ನಡೆಯುತ್ತದೆ. ಅಷ್ಟು ದೊಡ್ಡ ಸಂಖ್ಯೆಯ ಪೇಶ್ವೆ ಪಡೆ ಮಹರ್ ಸೈನಿಕರ ಎದುರು ಮಂಡಿಯೂರುತ್ತದೆ. ಬ್ರಿಟಿಷರಿಗೆ ಮಹತ್ವದ ವಿಜಯ ಲಭಿಸುತ್ತದೆ.ಸೈನಿಕರ ಸಾಹಸ ಬಿಂಬಿಸುವ ಕೋರೆಗಾಂವ್ ವಿಜಯಸ್ತಂಭ ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ತನಕ ಇತ್ತು. 22 ಮಹಾರ್ ಸೈನಿಕರ ತ್ಯಾಗದ ಬಗ್ಗೆ ಅದರಲ್ಲಿ ಪ್ರಸ್ತಾವ ಇತ್ತು. ಇಂದಿಗೂ ಆ ಸ್ಮಾರಕ ಅಸ್ಪೃಶ್ಯರ (ಮಹರ್) ವೀರಕಥೆಗೆ ಸಾಕ್ಷಿಯಂತೆ ಇದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿವರ್ಷ ಜನವರಿ 1 ರಂದು ಭೀಮಾ ಕೋರೆಗಾಂವ್‌ಗೆ ಭೇಟಿ ನೀಡಿ, ಗೌರವ ಸಲ್ಲಿಸುತ್ತಿದ್ದರು ಎಂದರು.

ಮೆರವಣಿಗೆಗೆ ಚಾಲನೆ ನೀಡಿದ ನಂಜುಂಡಸ್ವಾಮಿ ಅವರು ಮಾತನಾಡಿದರು.ಭಾರತೀಯ ಬೌದ್ದ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಬಸವರಾಜು, ಉಪಾಧ್ಯಕ್ಷ ಯಲಕ್ಕೂರು ಮಲ್ಲಿಕ್, ವಕೀಲರಾದ ರಾಮಸಮುದ್ರ ಪುಟ್ಟಸ್ವಾಮಿ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಕೆಸ್ತೂರು ಶಾಂತರಾಜು, ಸಿದ್ದು, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ, ಮುಖಂಡ ಜಿ.ಎಂ.ಗಾಡ್ಕರ್, ಹಿತರಕ್ಷಣಾ ಸಮಿತಿ ಅಧ್ಯಕ್ಷ ಶಿವಣ್ಣ, ಪ್ರವಾಸ ಮತ್ತು ಪ್ರಚಾರ ವಿಭಾಗದ ಉಪಾಧ್ಯಕ್ಷ ಉಮೇಶ್ ಕುದರ್‌ ಇತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT