ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ ಸೋಲು: ನಂಬಿದವರೇ ಕತ್ತು ಕುಯ್ದರು ಎಂದ ವಿ. ಸೋಮಣ್ಣ

ಕೃತಜ್ಞತಾ ಸಭೆಯಲ್ಲಿ ಹೆಸರು ಪ್ರಸ್ತಾಪಿಸದೇ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ ಹಿರಿಯ ಮುಖಂಡ
Published 18 ಮೇ 2023, 5:13 IST
Last Updated 18 ಮೇ 2023, 5:13 IST
ಅಕ್ಷರ ಗಾತ್ರ

ಚಾಮರಾಜನಗರ: ‘ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಸೋಲಿಗೆ ಕಾಂಗ್ರೆಸ್‌ ಅಥವಾ ಪುಟ್ಟರಂಗಶೆಟ್ಟಿ ಕಾರಣರಲ್ಲ. ನನ್ನ ಸಮಾಜದ ಮುಖಂಡರೇ ಕಾರಣ. ನಾನು ನಂಬಿದ್ದವರೇ ಕತ್ತು ಕುಯ್ದರು’ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ವಿ.ಸೋಮಣ್ಣ ಬುಧವಾರ ಅಸಮಾಧಾನ ವ್ಯಕ್ತಪಡಿಸಿದರು. 

ನಗರದ ಪಕ್ಷದ ಕಚೇರಿಯಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಯಾರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸಲಿಲ್ಲ. 

‘ನನ್ನ ಸೋಲಿಗೆ ಯಾರು ಕಾರಣ ಎಂಬುದು ಗೊತ್ತಿದೆ. 45 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿ ದ್ದೇನೆ. ಏನೂ ಗೊತ್ತಿಲ್ಲದ ಮುಗ್ಧ ಅಲ್ಲ. ಎಂಟು ಹತ್ತು ಜನರ ಪಾಪದ ಕೆಲಸ ದಿಂದ ಮನೆ ಹಾಳಾಗಿದೆ’ ಎಂದರು. 

‘ಸ್ವಂತ ತಮ್ಮನನ್ನೇ ಕೊಲೆ ಮಾಡಿದ ವನು‌ ಇಲ್ಲಿಗೆ ಬಂದಿದ್ದ. ಅಂತಹವರ ಜೊತೆ ಹೋಗುವ ನಮ್ಮವರು ಎಂತಹ ಮುಟ್ಠಾಳರು? ನಾನು ಬಯಸಿ ಇಲ್ಲಿ ಸ್ಪರ್ಧಿಸಿರಲಿಲ್ಲ. ಪಕ್ಷದ ಆದೇಶದ ಮೇರೆಗೆ ಬಂದೆ. ಜಿಲ್ಲೆಯನ್ನು ಅಭಿವೃದ್ಧಿ ಮಾಡುವ ಕನಸು ಕಂಡಿದ್ದೆ. ನಾಲ್ಕು ವರ್ಷಗಳಲ್ಲೇ ಅಭಿವೃದ್ಧಿ ಮಾಡುತ್ತಿದ್ದೆ. ಆದರೆ, ನನ್ನೊಬ್ಬನನ್ಜು ಸೋಲಿಸು ವುದಕ್ಕಾಗಿ ಇಡೀ ಜಿಲ್ಲೆಯನ್ನೇ ಹಾಳು ಮಾಡಿದಿರಿ’ ಎಂದು ಯಾರ ಹೆಸರು ಹೇಳದೆಯೇ ಅತೃಪ್ತಿ ಹೊರಹಾಕಿದರು.

‘ನನ್ನನ್ನು ಸೋಲಿಸಲು ‘ಅಲ್ಲಿಂದಲೇ’ ನಿರ್ದೇಶನ ಬಂದಿತ್ತು. ನನಗೆ ಎಲ್ಲವೂ ಗೊತ್ತು. ಯಥಾ ರಾಜ ತಥಾ ಪ್ರಜಾ. ಪ್ರಚಾರ ಸಭೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಇದ್ದರು. ಆದರೆ, ಅವರು 10 ನಿಮಿಷ ಇದ್ದರು. 60 ಕಿ.ಮೀ ದೂರವನ್ನು ರಸ್ತೆ ಮಾರ್ಗದಲ್ಲಿ ಹೋಗ ಬಾರದಿತ್ತೇ’ ಎಂದು ಯಾರ ಹೆಸರು ಹೇಳದೆಯೇ ಆಕ್ರೋಶ ವ್ಯಕ್ತಪಡಿಸಿದರು.

ಸೋಮಣ್ಣ ಪರ ಪ್ರಚಾರಕ್ಕಾಗಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಬಂದಿದ್ದರು. ಸಂಜೆ 6.15ರ ನಂತರ ಹೆಲಿಕಾಪ್ಟರ್‌ನಲ್ಲಿ ಹೋಗುವುದಕ್ಕೆ ಆಗುವುದಿಲ್ಲ ಎಂದು ಅವರು 15 ನಿಮಿಷ ಕಾರ್ಯಕ್ರಮದಲ್ಲಿ ಇದ್ದು, ಚಿಕ್ಕದಾಗಿ ಭಾಷಣ ಮಾಡಿ ಹೋಗಿದ್ದರು.  

ಪಕ್ಷದ್ರೋಹಿಗಳನ್ನು ದೂರ ಇಡಿ: ‘ಪಕ್ಷದ್ರೋಹ ಮಾಡಿದವರನ್ನು ಪಕ್ಷದ ಕಚೇರಿಗೆ ಸೇರಿಸದೆ ಚಪ್ಪಲಿಯಲ್ಲಿ ಹೊಡೆದು ಓಡಿಸಿ. ನಾರಾಯಣ ಪ್ರಸಾದ್‌, ನಿಮಗೆ ನೈತಿಕತೆ ಇದ್ದರೆ ಅಂತಹವರನ್ನು ಪಕ್ಷದ ಕಚೇರಿಯಿಂದ ದೂರ ಇರಿಸಿ’ ಎಂದು ಹೇಳಿದರು. 

‘ಪಕ್ಷ ನನಗೆ ತಾಯಿ ಇದ್ದಂತೆ. ಅಂತಹ ದ್ದರಲ್ಲಿ ಪಕ್ಷದ ಒಳಗಡೆ ಇದ್ದವರೇ, ನನ್ನ ಜೊತೆ ಓಡಾಡಿಕೊಂಡು ಅಪಪ್ರಚಾರ ಮಾಡಿದರು. ಗೆದ್ದರೆ ಸೋಮಣ್ಣ ಇಲ್ಲಿ ಇರುವುದಿಲ್ಲ ಎಂದು ಹೇಳಿದಿರಿ. ಮಗ ನನ್ನು ಕರೆದುಕೊಂಡು ಬರುತ್ತಾನೆ ಎಂದಿರಿ. ನಾನು ಇಲ್ಲೇ ಇರುತ್ತೇನೆ ಎಂದು ಹೇಳಿದ್ದೆ. 12 ಚುನಾವಣೆ ಎದುರಿಸಿರುವ ನನಗೆ ಯಾವತ್ತು ಇಂತಹ ಮಾನಸಿಕ ಯಾತನೆ ಆಗಿರಲಿಲ್ಲ. ಮಹದೇಶ್ವರನ ಮೇಲಾಣೆ, ನನ್ನ ಮಕ್ಕಳ ಮೇಲಾಣೆ. ಇಲ್ಲಿಗೆ ನಾನಾಗಿಯೇ ಬರಲಿಲ್ಲ. ಪಕ್ಷದ ಆದೇಶದ ಮೇರೆಗೆ ಬಂದೆ’ ಎಂದು ಸೋಮಣ್ಣ ತಿಳಿಸಿದರು.

‘ನಿಮಗೆ ಸ್ವಾಭಿಮಾನ, ಗೌರವ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಇಲ್ಲಿರುವ ಒಬ್ಬೊಬ್ಬನೂ 10 ಮತಗಳನ್ನು ಹಾಕಿಸಿ ದ್ದರೆ ಸಾಕಿತ್ತು. ನನಗೆ ಎಂತಹ ಬಳುವಳಿ ಕೊಟ್ಟಿರಿ ನೀವು? ಈ ಕೃಪಾಪೋಷಿತ ನಾಟಕದಲ್ಲಿ ಮೋಸ ಮಾಡಿದವರು ನನ್ನ ಸಮುದಾಯದವರು. ಎಲ್ಲಿವರೆಗೆ ಮನೆಹಾಳು ಬಿದ್ದಿರುತ್ತದೋ ಅಲ್ಲಿವರೆಗೆ ಉದ್ಧಾರ ಆಗುವುದಿಲ್ಲ’ ಎಂದರು.

‘ಕೆಜೆಪಿ ಸ್ಥಾಪನೆಯಾದಾಗ ಅದಕ್ಕೆ ಸೇರ್ಪಡೆಯಾಗುವುದಿಲ್ಲ ಎಂದು ಹೇಳಿ ದವನು ಸೋಮಣ್ಣ ಒಬ್ಬನೇ. ಬೇರೆ ಯಾರೂ ಇದನ್ನು ಹೇಳುವ ಧೈರ್ಯ ಮಾಡಲಿಲ್ಲ’ ಎಂದು ಸೋಮಣ್ಣ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಜಿ.ನಾರಾಯಣ ಪ್ರಸಾದ್‌, ಕೋಟೆ ಎಂ.ಶಿವಣ್ಣ, ಮುಖಂಡರಾದ ಎಸ್‌.ಮಹದೇವಯ್ಯ, ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ, ಅಮ್ಮನಪುರ ಮಲ್ಲೇಶ್‌, ಎಂ.ರಾಮಚಂದ್ರ ಇದ್ದರು.

ಜಿಲ್ಲಾ ಘಟಕದ ವಿರುದ್ಧ ಆಕ್ರೋಶ

ಸಭೆ ಆರಂಭವಾಗುತ್ತಲೇ ಕೆಲವು ಕಾರ್ಯಕರ್ತರು ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಒಳೇಟಿನಿಂದ ಸೋಲಾಗಿದೆ. ಜಿಲ್ಲಾ ಘಟಕ ಮತ್ತು ಅಧ್ಯಕ್ಷರು, ಪದಾಧಿಕಾರಿಗಳು ಸರಿಯಾಗಿ ಇದ್ದಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಪಕ್ಷದಲ್ಲಿ ಇದ್ದುಕೊಂಡು ಕಳ್ಳಾಟದಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಇಂದು ಸೋಲುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಗೊಂದಲದ ವಾತಾವರಣ ಉಂಟಾಯಿತು. 

ಸೋಮಣ್ಣ ಮಧ್ಯಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.

‘ಅಭಿವೃದ್ಧಿ ಉದ್ದೇಶವಾಗಿತ್ತು’

‘ಕ್ಷೇತ್ರ ಹಾಗೂ ಜಿಲ್ಲೆಯನ್ನು ಅಭಿವೃದ್ಧಿ ಮಾಡುವುದು ನನ್ನ ಉದ್ದೇಶ ಆಗಿತ್ತು. ವರ್ಷಕ್ಕೆ 10 ಸಾವಿರದಂತೆ ಐದು ವರ್ಷಗಳಲ್ಲಿ 50 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಗುರಿ ಇಟ್ಟುಕೊಂಡಿದ್ದೆ. ಆದರೆ, ನನ್ನ ಕೈ ಕಾಲು ಕತ್ತರಿಸಿ ಕೂರಿಸಿ ಬಿಟ್ಟರು. ನಾನೇನು ತಪ್ಪು ಮಾಡಿದ್ದೆ? 103 ಡಿಗ್ರಿ ಜ್ವರ ಬಂದರೂ ಕ್ಷೇತ್ರದಲ್ಲಿ ಸುತ್ತಾಡಿದ್ದೆ. ನೀವೆಲ್ಲರೂ ಶ್ರಮ ವಹಿಸಿ ಕೆಲಸ ಮಾಡಿದ್ದರೆ ನಾನು ಗೆಲ್ಲುತ್ತಿದ್ದೆ. ನಿಮ್ಮೆಲ್ಲರನ್ನು ನಂಬಿದ್ದೇ ತಪ್ಪಾಯಿತು’ ಎಂದು ಸೋಮಣ್ಣ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT