ಮಹದೇಶ್ವರ ಬೆಟ್ಟ (ಚಾಮರಾಜನಗರ): ಸ್ವಗ್ರಾಮ ಕಾರಜೋಳದಲ್ಲಿ ಜನರು ತೊಡಿಸಿದ ಚಿನ್ನದ ಕಿರೀಟವನ್ನು ಸರ್ಕಾರಕ್ಕೆ ನೀಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿದರು.
ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಊರಿನ ಜನರು ಹಟ ಮಾಡಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದರು. ಬಂಗಾರದ ಕಿರೀಟ ಹಾಕುತ್ತಾರೆ ಎಂದು ಗೊತ್ತಿರಲಿಲ್ಲ. ನಾನು ಬೇಡ ಅಂದರೂ ಎಲ್ಲರೂ ವೇದಿಕೆಗೆ ಬಂದು ಕಿರೀಟ ತೊಡಿಸಿದರು. ಅದನ್ನು ಸರ್ಕಾರಕ್ಕೆ ನೀಡಿದ್ದೇನೆ’ ಎಂದರು.
‘ನಾನೊಬ್ಬ ಸಮಾಜ ಸೇವಕ, ಸಮಾಜದ ಕಾರ್ಯಕರ್ತ. ಸರ್ಕಾರದ ಅಧಿಕಾರ ಉಪಯೋಗ ಮಾಡಿಕೊಂಡು ಊರಿನ ಅಭಿವೃದ್ಧಿ ಮಾಡಿದ್ದೇನೆ. ಅದು ಜನರಿಗೆ ಸಲ್ಲಬೇಕಾದ ಗೌರವವೇ ವಿನಾ ನನಗಲ್ಲ’ ಎಂದರು.
ಕಾರಜೋಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿನ್ನದ ಕಿರೀಟ ತೊಡಿಸಿದ್ದ ಜನರು, ಗೋವಿಂದ ಕಾರಜೋಳ ಅವರು ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಹಾರೈಸಿದ್ದರು.
ಯಡಿಯೂರಪ್ಪ ಪೂರ್ಣಾವಧಿ ಸಿ.ಎಂ: ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಪ್ರಶ್ನೆಗೂ ಉತ್ತರಿಸಿದ ಅವರು, ‘ಯಡಿಯೂರಪ್ಪ ಅವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆ. ಯಾರ್ಯಾರೋ ಕಥೆಗಳನ್ನು ಹೇಳುತ್ತಾರೆ. ಅವುಗಳಲ್ಲಿ ಹುರುಳಿಲ್ಲ’ ಎಂದರು.