ಯಳಂದೂರು (ಚಾಮರಾಜನಗರ): ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಆಮೆಕೆರೆ ಕ್ಯಾಂಪಸ್ನಲ್ಲಿ ಗುರುವಾರ ಆನೆ ಗಣತಿ ಮಾಡುತ್ತಿದ್ದ ವೇಳೆ ಆನೆಯೊಂದು ಏಕಾಏಕಿ ಸಿಬ್ಬಂದಿ ಮೇಲೆ ದಾಳಿ ಮಾಡಿದೆ.
ಸಿಬ್ಬಂದಿ ದಾಳಿಯಿಂದ ತಪ್ಪಿಸಿಕೊಂಡಿದ್ದು, ತರಚಿತ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಮೆಕೆರೆ ವ್ಯಾಪ್ತಿಯಲ್ಲಿ ಮೂವರು ಸಿಬ್ಬಂದಿ ಮೂರು ದಿನಗಳ ಆನೆಗಣತಿಯ ಮೊದಲ ದಿನ ಗಣತಿ ಕಾರ್ಯದಲ್ಲಿ ತೊಡಗಿದ್ದರು. ವಿವರಗಳನ್ನು ದಾಖಲು ಮಾಡುತ್ತಿದ್ದ ಸಂದರ್ಭದಲ್ಲಿ ದಿಢೀರ್ ಆಗಿ ಒಬ್ಬ ಗಸ್ತುಪಾಲಕ ಸಿಬ್ಬಂದಿ ಮೇಲೆ ಆನೆ ದಾಳಿ ಮಾಡಿದೆ. ಎಚ್ಚೆತ್ತುಕೊಂಡ ಅವರು ತಕ್ಷಣವೇ ತಪ್ಪಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅವರಿಗೆ ಯಳಂದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರತಿಕ್ರಿಯೆಗೆ ಅಧಿಕಾರಿಗಳು ಲಭ್ಯರಾಗಿಲ್ಲ.