ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ವ್ಯಾಪ್ತಿಯ ರೈತರಿಗೆ ಉಪಟಳ ನೀಡುತ್ತಿದ್ದ ಗಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಬೆಳಗ್ಗೆ ಸೆರೆಹಿಡಿದರು.
ಗೋಪಾಲಸ್ವಾಮಿ ಬೆಟ್ಟ ವಲಯದ ಹಿರಿಕೆರೆ ಹಿಂಭಾಗದ ಪ್ರದೇಶದಲ್ಲಿ ರಾಂಪುರ ಆನೆ ಶಿಬಿರದ ಪಾರ್ಥಸಾರಥಿ, ಗಣೇಶ ಹಾಗೂ ದುಬಾರೆ ಆನೆ ಶಿಬಿರದ ನಾಲ್ಕು ಆನೆಗಳ ಸಹಾಯದಿಂದ 45 ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಯಿತು.
ಮೂರ್ನಾಲ್ಕು ತಿಂಗಳಿನಿಂದ ಪುಂಡಾನೆ ರೈತರ ಜಮೀನುಗಳಿಗೆ ನುಗ್ಗಿ ದಾಂದಲೆ ಮಾಡುತ್ತಿತ್ತು. ಅನೇಕ ರೈತರ ಬೆಳೆಗಳನ್ನು ನಾಶ ಮಾಡಿತ್ತು. ಇದರಿಂದಾಗಿ ಬೇಸತ್ತ ರೈತರು ಆನೆ ಸೆರೆಗೆ ಅರಣ್ಯ ಇಲಾಖೆಗೆ ಒತ್ತಾಯ ಮಾಡಿದ್ದರು.
ಒಂದು ವಾರದಿಂದ ಆನೆ ಸೆರೆಗೆ ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆ ಮಾಡಲಾಗಿತ್ತು. ವಾರದ ಹಿಂದೆ ಹಿರಿಕೆರೆ ಭಾಗದಲ್ಲಿ ಆನೆಗೆ ಅರಿವಳಿಕೆ ಚುಚ್ಚುಮದ್ದು ನೀಡುವ ಸಮಯದಲ್ಲಿ ಆನೆ ತಪ್ಪಿಸಿಕೊಂಡಿತ್ತು.
ಮಾ.10ರಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಬಂಡೀಪುರಕ್ಕೆ ಭೇಟಿ ನೀಡಿದ್ದಾಗ ಹಂಗಳ ಗ್ರಾಮದ ಮಾಧು ಹಾಗೂ ಇತರೆ ರೈತರು ಪುಂಡಾನೆ ಸೆರೆಗೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ್ದ ಸಚಿವರು ಆನೆ ಸೆರೆಗೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು.