ಮಹದೇಶ್ವರಬೆಟ್ಟ: ಇಲ್ಲಿನ ಪ್ರಸಿದ್ಧ ಯಾತ್ರಾಸ್ಥಳ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಗಳಲ್ಲಿ 28 ದಿನಗಳ ಅವಧಿಯಲ್ಲಿ ದಾಖಲೆಯ ₹2.83 ಕೋಟಿ ರೂಪಾಯಿ ಹಣ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.
ಮಾದಪ್ಪನ ಕ್ಷೇತ್ರದಲ್ಲಿ ಹುಂಡಿ ಎಣಿಕೆಯಲ್ಲಿ ಸಂಗ್ರಹವಾದ ಅತಿ ಹೆಚ್ಚಿನ ಮೊತ್ತ ಇದು ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಹೇಳಿದ್ದಾರೆ.
ಬೆಟ್ಟದಲ್ಲಿರುವ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಹುಂಡಿ ಎಣಿಕೆ ನಡೆದಿದೆ. ಬೆಳಿಗ್ಗೆ ಆರಂಭವಾದ ಎಣಿಕೆ ಕಾರ್ಯ ರಾತ್ರಿ 12 ಗಂಟೆಯ ವರೆಗೂ ನಡೆಯಿತು. ಪ್ರಾಧಿಕಾರದ 300ಕ್ಕೂ ಹೆಚ್ಚು ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.
ಈ ಹಿಂದೆ, ಫೆಬ್ರುವರಿ 10ರಂದು ಹುಂಡಿ ಎಣಿಕೆ ನಡೆದಿತ್ತು. ಫೆ.28ರಿಂದ ಮಾರ್ಚ್ 3ರವರೆಗೆ ಶಿವರಾತ್ರಿ ಜಾತ್ರಾ ಮಹೋತ್ಸವವೂ ನಡೆದಿತ್ತು. ಭಾರಿ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಮಹದೇಶ್ವರಸ್ವಾಮಿಯ ದರ್ಶನ ಪಡೆದಿದ್ದರು.
28 ದಿನಗಳಲ್ಲಿ ಹುಂಡಿಗಳಲ್ಲಿ ₹2,83,12,841 ಸಂಗ್ರಹವಾಗಿದ್ದು, ಈ ಪೈಕಿ ₹2,66,37,095 ಮೌಲ್ಯದ ನೋಟುಗಳನ್ನು ಭಕ್ತರು ಕಾಣಿಕೆ ರೂಪದಲ್ಲಿ ಹಾಕಿದ್ದಾರೆ. ₹16,75,746 ಮೊತ್ತ ನಾಣ್ಯದ ರೂಪದಲ್ಲಿ ಬಂದಿದೆ.
ಇದಲ್ಲದೇ, 3.800 ಕೆಜಿ ಬೆಳ್ಳಿ ಹಾಗೂ 70 ಗ್ರಾಂ ಚಿನ್ನವನ್ನು ಕಾಣಿಕೆ ರೂಪದಲ್ಲಿ ಭಕ್ತರು ಹುಂಡಿಗಳಿಗೆ ಹಾಕಿದ್ದಾರೆ.