ಚಾಮರಾಜನಗರ: ಹಲವು ವಾರಗಳ ನಂತರ ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಕ್ಯಾರೆಟ್ ಬೆಲೆಯೂ ಕಡಿಮೆಯಾಗಿದೆ.
ನಗರದ ಹಾಪ್ಕಾಮ್ಸ್ನಲ್ಲಿ ಸೋಮವಾರ ಬೀನ್ಸ್ ಕೆಜಿಗೆ ₹20 ಇತ್ತು. ಕಳೆದವಾರದವರೆಗೂ ₹40 ಇತ್ತು.ತಿಂಗಳ ಹಿಂದೆ ಒಂದು ಕೆಜಿ ಬೀನ್ಸ್ ಖರೀದಿಗೆ ₹60 ರಿಂದ ₹80ರವರೆಗೂ ತೆರಬೇರಬೇಕಿತ್ತು.
ಮಾರುಕಟ್ಟೆಗೆ ಬೀನ್ಸ್ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಬೆಲೆ ಕಡಿಮೆಯಾಗಿದೆ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ತಿಳಿಸಿದರು.
ಕ್ಯಾರೆಟ್ ಬೆಲೆಯಲ್ಲೂ ₹10 ಇಳಿಕೆಯಾಗಿದೆ. ಹಾಪ್ಕಾಮ್ಸ್ ಮಳಿಗೆಗಳಲ್ಲಿ ಕೆಜಿಗೆ ₹30 ಇದೆ. ಹೋದವಾರದವರೆಗೂ ₹40 ಇತ್ತು.
ಉಳಿದಂತೆ ಟೊಮೆಟೊ ಬೆಲೆ (₹15) ಯಥಾಸ್ಥಿತಿ ಮುಂದುವರಿದಿದೆ. ಈರುಳ್ಳಿ ಕೆಜಿಗೆ ₹40 ಇದೆ. ಸೌತೆಕಾಯಿ ₹20ಕ್ಕೆ ಸಿಗುತ್ತಿದೆ. ದಪ್ಪಮೆಣಸಿನಕಾಯಿಯ ದುಬಾರಿ ಬೆಲೆ (₹80) ಈ ವಾರವೂ ಮುಂದುವರಿದಿದೆ. ಗೆಡ್ಡೆಕೋಸು ಬೇಡಿಕೆ ಉಳಿಸಿಕೊಂಡಿದ್ದು, ಕೆಜಿಗೆ ₹60 ಕೊಡಬೇಕು.
ಚಳಿಗಾಲ ಆರಂಭವಾಗಿರುವುದರಿಂದ ಅವರೆಕಾಯಿ ಹಾಗೂ ತೊಗರಿಕಾಯಿಗೆ ಬೇಡಿಕೆ ಬಂದಿದ್ದು, ಕೆಜಿಗೆ ₹60 ಇದೆ. ಇವೆರಡಕ್ಕೂ ಬೇಡಿಕೆ ಹೆಚ್ಚಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು. ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
ಹಣ್ಣುಗಳ ಬೆಲೆ ಸ್ಥಿರ: ಹಣ್ಣುಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ. ಹಾಪ್ಕಾಮ್ಸ್ನಲ್ಲಿ ಸೇಬಿಗೆ ₹100 ಇದೆ. ಮೂಸಂಬಿ, ಕಿತ್ತಳೆ ₹80ಕ್ಕೆ ಸಿಗುತ್ತಿದೆ. ದಾಳಿಂಬೆಯ ದುಬಾರಿ ಬೆಲೆ (₹160) ಮುಂದುವರಿದಿದೆ. ಕಲ್ಲಂಗಡಿಗೆ ಕೆಜಿಗೆ ₹40 ಇದೆ. ಬಾಳೆಹಣ್ಣುಗಳ ಬೆಲೆಯಲ್ಲೂ ವ್ಯತ್ಯಾಸವಾಗಿಲ್ಲ.
ಚಿಲ್ಲರೆ ಮಾಂಸ ಮಾರುಕಟ್ಟೆಯಲ್ಲಿ ಚಿಕನ್ ಬೆಲೆ ₹160ರಿಂದ ₹190ರವರೆಗೂ ಇದೆ. ಮಟನ್ ಧಾರಣೆ ಯಥಾಸ್ಥಿತಿ ಮುಂದುವರಿದಿದೆ.
ಹೂವಿಗೆ ಬೆಲೆ ಹೆಚ್ಚಳ: ದೀಪಾವಳಿ ಹಬ್ಬದ ಬಳಿಕ ಕುಸಿದಿದ್ದ ಹೂವುಗಳ ಧಾರಣೆ ಈ ವಾರ ಕೊಂಚ ಹೆಚ್ಚಾಗಿದೆ.
ಚೆಂಡು ಹೂ, ಬಟನ್ ಗುಲಾಬಿ, ಸುಗಂಧರಾಜ ಬಿಟ್ಟರೆ ಉಳಿದ ಹೂವುಗಳ ಬೆಲೆ ಹೆಚ್ಚಿದೆ.
ಚೆನ್ನೀಪುರ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕೆಜಿ ಕನಕಾಂಬರಕ್ಕೆ ಸೋಮವಾರ ₹1,200ರಿಂದ ₹1600 ರವರೆಗೆ ಬೆಲೆ ಇತ್ತು.
ಕಾಕಡಕ್ಕೆ ₹240ರಿಂದ ₹280, ಮರ್ಲೆಗೆ ₹320, ಸೇವಂತಿಗೆ ಕೆಜಿಗೆ ₹60ರಿಂದ ₹80ರರೆಗೆ ಬೆಲೆ ಇದೆ.
‘ಮದುವೆ, ಗೃಹ ಪ್ರವೇಶಗಳಂತಹ ಶುಭ ಸಮಾರಂಭಗಳು ಸಾಕಷ್ಟು ನಡೆಯುತ್ತಿದ್ದು, ಹೂವುಗಳಿಗೆ ಬೇಡಿಕೆ ಇದೆ. ಹಾಗಾಗಿ, ಬೆಲೆಯಲ್ಲೂ ಕೊಂಚ ಏರಿಕೆ ಕಂಡು ಬಂದಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಹೇಳಿದರು.